Wednesday, May 23, 2018

ಚುನಾವಣೆಯ ಗುಂಗು ಮರೆಸಿದ ಹಾಯ್ಕುಗಳು!


ಅಂತೂ ಇಂತೂ ಚುನಾವಣೆ ಮುಗಿಯಿತು. ಕಾಮೆಡಿ, ಫೈಟಿಂಗ್, ಸೆಂಟಿಮೆಂಟ್ ಒಳಗೊಂಡ ಥ್ರಿಲ್ಲರ್ ಸಿನಿಮಾವೊಂದರ ಎಲ್ಲ ರೋಚಕತೆಯನ್ನು ಬಿಂಬಿಸುವಂತಿದ್ದ ಈ ಚುನಾವಣೆಗೆ 'ಶುಭಂ' ಪರದೆ ಬಿತ್ತು. ಆದರೆ ಈ ಚುನಾವಣೋತ್ತರದ ಘಟನಾವಳಿಗಳು ನನಂಥವರ ಮನದಲ್ಲಿ ಹಲವಾರು ಪ್ರಶ್ನೆಗಳನ್ನೂ ಗೊಂದಲಗಳನ್ನೂ ಹುಟ್ಟುಹಾಕುತ್ತ ಹೋದವು. ಅಂಥ ಒಂದಿಷ್ಟು ಪ್ರಶ್ನೆ ಮತ್ತು ಗೊಂದಲಗಳನ್ನು ಸರಳವಾಗಿ ಅರ್ಥ ಮಾಡಿಸಲೆಂದು ನಿಮ್ಮೆದುರಿಗೆ ಒಂದೆರೆಡು ಚಿತ್ರಣ ಇಡುತ್ತಿದ್ದೇನೆ. 
    
ಚಿತ್ರಣ 1: ಇಲ್ಲೊಬ್ಬ ಯುವಕನಿದ್ದಾನೆ. ನಿನ್ನೆ ಮೊನ್ನೆಯವರೆಗೂ ತನ್ನೂರಿನ ಶಾಲಾ ಕಾಲೇಜುಗಳಲ್ಲಿ ವಿಧೇಯ ವಿದ್ಯಾರ್ಥಿಯೆಂದು ಗುರುತಿಸಿಕೊಂಡಂಥವನು. ಈಗಷ್ಟೇ ಬೆಂಗಳೂರಿನಲ್ಲಿ ನೌಕರಿ ಗಿಟ್ಟಿಸಿಕೊಂಡು ಸ್ವಂತದ ಬದುಕು ಕಟ್ಟಿಕೊಂಡಿರುವಂಥವನು. ಹೊಸ ಉತ್ಸಾಹ, ಹೊಸ ಧೈರ್ಯದ ಜೊತೆಗೆ ಏನೇನೋ ಕನಸುಗಳು. ಹೊಸ ಊರು ಈತನಿಗೆ ಸಿಗರೇಟು ಕಲಿಸಿದೆ. ಹೀಗಾಗಿ ಕೈಯಲ್ಲಿ ಸಿಗರೇಟಿದೆ. ಹಾಗೆ ಸಿಗರೇಟು ಹಿಡಿದು ನಡೆಯುತ್ತಿರುವ ಈ ಹುಡುಗ ಸೊಂಪು ಮಜದಲ್ಲಿರುವನು. ಈತನ ದುರಾದೃಷ್ಟಕ್ಕೋ ಏನೋ ಈ ಅಪರಿಚಿತ ಊರಿನಲ್ಲಿ ಎಲ್ಲಿಂದಲೋ ಅಕಸ್ಮತ್ತಾಗಿ ಪ್ರೈಮರಿ ಮೇಷ್ಟ್ರು ಎದುರಾಗಿಬಿಟ್ಟಿದ್ದಾರೆ. ವಿಚಲಿತನಾಗಿರುವ ಹುಡುಗ. ಸಿಗರೇಟನ್ನು ಬೆನ್ನ ಹಿಂದೆ ಮಡಚಿಕೊಂಡು ಮೇಷ್ಟ್ರನ್ನು ನೋಡಿದರೂ ನೋಡದವನಂತೆ ಅವಸರವಸರವಾಗಿ ಕಾಲ್ಕಿತ್ತಿದ್ದಾನೆ. ಶಿಷ್ಯನನ್ನು ಗುರುತಿಸಿದ ಮಾಸ್ತರರಿಗೆ ಬೇಸರವಿದ್ದಂತಿಲ್ಲ. ಅವರು ಮನದಲ್ಲೇ ಮುಗುಳ್ನಗುತ್ತಿದ್ದಾರೆ. ಆ ನಗುವಿನಲ್ಲಿ ಏನೆಲ್ಲ ಅಡಗಿರುವಂತಿದೆ. 

ಚಿತ್ರಣ 2: ಅದೇ ಹುಡುಗ. ಅದೇ ರಸ್ತೆ. ಧುತ್ತೆಂದು ಎದುರಾಗಿರುವ ಅದೇ ಮೇಷ್ಟ್ರು. ಈ ಹುಡುಗ ಸಿಗರೇಟನ್ನು ಬಚ್ಚಿಟ್ಟುಕೊಳ್ಳದೇ ಮಾಸ್ತರರ ಮುಂದೆಯೇ ಧೂಮದುಂಗುರ ಸೃಷ್ಟಿಸುತ್ತಿದ್ದಾನೆ. ಅಲ್ಲೊಂದು ಲೆಕ್ಕಾಚಾರವಿದೆ. ತಾನೀಗ ಮಾಸ್ತರರ ವಿದ್ಯಾರ್ಥಿಯಲ್ಲ. ಬದಲಾಗಿ ವಯಸ್ಕ. ಸಿಗರೇಟಿಗೆ ಕೊಟ್ಟ ಹಣವೂ ತನ್ನದೇ. ಇಷ್ಟಕ್ಕೂ ಸರ್ಕಾರವೇನೂ ಸಿಗರೇಟನ್ನು ಬ್ಯಾನ್ ಮಾಡಿಲ್ಲವಲ್ಲ? ಹೆಚ್ಚೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ಕಾನೂನಿದೆ ಅಷ್ಟೇ. ಹಾಗಂತ ಸರಕಾರ ಎಲ್ಲರ ಮೇಲೆ ಎಷ್ಟೂಂತ ಕಣ್ಣು ನೆಟ್ಟಿಕೊಂಡು ಕೂತಿರುತ್ತದೆ. ಚಲ್ತಾ ಹೈ ಭಾಯ್! ಅರೇ, ಮಾಸ್ತರರು ಯಾಕೆ ನನ್ನನ್ನು ಕಂಡೂ ಕಾಣದಂತೆ ಮುಜುಗರದಿಂದ ಓಡುತ್ತಿದ್ದಾರೆ? 

   ಮೊನ್ನೆ ಆಗಿದ್ದೂ ಥೇಟ್ ಇದೇ. ಪೊಲಿಟಿಕಲಿ ಕರೆಕ್ಟ್ ಅನ್ನುವಂಥ ವಾಕ್ಯ ಬಳಸದೇ ನೇರಾನೇರ ಹೇಳಬಹುದಾದರೆ, ಅಲ್ಲಿ ಎಲ್ಲರ ಬಳಿಯೂ ಆಮಿಷಗಳಿದ್ದವು. ಅದಕ್ಕೆ ತಕ್ಕಂತೆ ಎದುರಾಳಿಗಳ ಬಳಿ ಅಂಕುಶಗಳಿದ್ದವು. ಅವುಗಳ ಪೈಕಿ ಕೆಲವಷ್ಟೇ ಹೊರಜಗತ್ತಿಗೆ ಗೋಚರಿಸಿದರೆ ಮಿಕ್ಕವು ಗೋಚರಿಸಲಿಲ್ಲ. ಅತಿ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಅಧಿಕಾರಕ್ಕಾಗಿ ಏನೆಲ್ಲ ಮಾಡಬಹುದಿತ್ತೋ ಅದೆಲ್ಲವನ್ನೂ ಮಾಡಿತು. ತನ್ನೆಲ್ಲ ತತ್ವ, ಸಿದ್ಧಾಂತಗಳನ್ನು ಮಣ್ಣುಪಾಲು ಮಾಡಿದ್ದಲ್ಲದೇ ನಿಯಮಾವಳಿಗಳನ್ನೆಲ್ಲ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿತು. ಇನ್ನು ಕಾಂಗ್ರೆಸ್ ಮತ್ತು ಜನತಾದಳ. ಕಣದಲ್ಲಿರುವಾಗ ರಾಜಕೀಯ ಸ್ಪರ್ಧಿಗಳಿಬ್ಬರು ಎದುರಾಳಿಗಳ ಪಾಲಸಿಗಳ ಬಗ್ಗೆ, ಆಡಳಿತದ ಬಗ್ಗೆ ಪರಸ್ಪರ ಟೀಕಿಸಬಹುದಷ್ಟೇ. ಆದರೆ ಇಲ್ಲಿ ಇವರಿಬ್ಬರೂ ವೈಯಕ್ತಿಕ ಮಟ್ಟದಲ್ಲಿ ಅಪ್ಪ, ಆಣೆ, ಪ್ರಮಾಣ ಅಂತೆಲ್ಲ ಬೀದಿಗಿಳಿದ್ದುಂಟು. ಈ ಸ್ಪರ್ಧಿಗಳನ್ನು ನಂಬಿಕೊಂಡು ಆಯಾ ಪಕ್ಷದ ಕಾರ್ಯಕರ್ತರೂ ವೈಯಕ್ತಿಕ ಜಿದ್ದಿಗೆ ಬಿದ್ದು ಚುನಾವಣೆಯಲ್ಲಿ ಹೊಡೆದಾಡಿರುತ್ತಾರೆ. ಈಗ ಪ್ರಹಸನವೊಂದು ಹೀಗೆ ದಿಢೀರನೇ ಬದಲಾಗಿರುವ ಪ್ರಸಂಗದಲ್ಲಿ ಈ ಎದುರಾಳಿಗಳೇ ಪರಸ್ಪರರ ಹೆಗಲ ಮೇಲೆ ಕೈಹಾಕಿಕೊಂಡಿರುವಾಗ ಈ ಎರಡೂ ಪಕ್ಷಗಳ ಕಾರ್ಯಕರ್ತರ ಗತಿಯೇನು?                                 

   ವಿಪರ್ಯಾಸವೆಂದರೆ, ಇದೆಲ್ಲ ನಡೆದಿದ್ದು ಸಂವಿಧಾನಕ್ಕೆ ಅನುಗುಣವಾಗಿಯೇ. ಅದು ಮೌಲ್ಯಯುತವೋ, ನೈತಿಕವಾದದ್ದೋ ಬೇರೆ ವಿಷಯ. ಆದರೆ ವಿಶ್ಲೇಷಕರ ಪ್ರಕಾರ ಸಾಂವಿಧಾನಿಕವಾಗಿ ಮತ್ತು ಶಾಸನಬದ್ಧವಾಗಿ ಸರಿ ಇರುವಂಥದ್ದು. ಎಲ್ಲಕ್ಕಿಂತ ಹೆಚ್ಚಾಗಿ ವ್ಯವಹಾರಿಕವಾಗಿ ಸರಿ ಇರುವಂಥದ್ದು. ಹೀಗಿರುವಾಗ ಆ ಸಿಗರೇಟಿನ ಹುಡುಗ ತನ್ನ ಹಳೆಯ ಮಾಸ್ತರರನ್ನು ಕಂಡಕೂಡಲೇ ಭಯದಿಂದಲೋ, ಗೌರವದಿಂದಲೋ ತನ್ನ ಮೌಲ್ಯಗಳನ್ನು ಪ್ರತಿಪಾದಿಸಬೇಕಿತ್ತೆಂದು ನಿರೀಕ್ಷಿಸುವದು ಹೇಗೆ ಸಾಧ್ಯ? ಹಾಗಾದರೆ ಸಾಮಾನ್ಯ ಜನತೆಗೆ ಇಂಥ ನಿರೀಕ್ಷೆಗಳು ಇರಲೇಬಾರದೆ? ಇಷ್ಟಕ್ಕೂ ನಮ್ಮಲ್ಲಿನ ವ್ಯವಸ್ಥೆಯೇ ವೈರುಧ್ಯಗಳಿಂದ ಕೂಡಿದೆ. ಅದು ನೈತಿಕತೆಯ ಬಗ್ಗೆ ಯಾವುದನ್ನೂ ನಿಖರವಾಗಿ ಹೇಳುವದಿಲ್ಲ. ಹೆಚ್ಚೆಂದರೆ ಅದು ಸಿಗರೇಟ್ ಪ್ಯಾಕಿನ ಮೇಲೆ ಧೂಮಪಾನದ ಅಪಾಯಗಳ ಬಗ್ಗೆ ಮಾತ್ರ ದೊಡ್ಡದಾಗಿ ಚಿತ್ರಿಸಿ ಕೈತೊಳೆದುಕೊಳ್ಳುತ್ತದಷ್ಟೇ!  

   ಹೀಗಿರುವಾಗ, ಇಲ್ಲಿ ಇನ್ನೊಂದು ರೀತಿಯ ತಮಾಷೆ ನಡೆಯಿತು. ಈ ಸಲದ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ಜನತೆಯ ಕಿವಿಯಲ್ಲಿ ನೂರಾರು ಬಾರಿ ಒತ್ತಾಯವಾಗಿ ತೂರಿಸಲ್ಪಟ್ಟ ಒಂದು ಪದವೆಂದರೆ- ಅದು ಸೆಕ್ಯುಲರ್. ಅತ್ಯಂತ ಕ್ಲೀಷೆಯಿಂದ ಬಳಕೆಯಾಗುತ್ತಿರುವ ಈ ಸೆಕ್ಯುಲರ್ ಪದದ ಬಗ್ಗೆ ನಮ್ಮ ಸಂವಿಧಾನದಲ್ಲಿ ಏನು ಹೇಳಲಾಗಿದೆ ಅಂತ ಹುಡುಕುತ್ತಿದ್ದಾಗ ಕುತೂಹಲಕ್ಕೆಂದು ನಿಘಂಟಿನಲ್ಲೂ ಒಮ್ಮೆ ಹುಡುಕಾಡಿದೆ. ಮಜದ ಸಂಗತಿಯೆಂದರೆ, ಸೆಕ್ಯುಲರ್ ಎಂಬ ಪದಕ್ಕೆ ಡಿಕ್ಷನರಿಯಲ್ಲಿ 'ಜಾತ್ಯತೀತ' ಎಂಬ ಅರ್ಥದ ಜೊತೆಜೊತೆಗೆ 'ಐಹಿಕ, ಸಾಂಸಾರಿಕ, ಪಾರಮಾರ್ಥಿಕವಲ್ಲದ' ಎಂಬ ಇನ್ನಿತರ ಅರ್ಥಗಳೂ ಇವೆ ಅಂತ ಗೊತ್ತಾಗುತ್ತಿದ್ದಂತೆಯೇ ಬೇಸ್ತುಬಿದ್ದೆ!

   ಇದೆಲ್ಲದರ ಮಧ್ಯೆ ಚುನಾವಣೆ ಫಲಿತಾಂಶ ಏನಾಗಬಹುದು ಅಂತೆಲ್ಲ ಕ್ಷಣಕ್ಷಣಕ್ಕೂ ಬ್ರೇಕಿಂಗ್ ಸುದ್ದಿ ಬಿತ್ತರಿಸುತ್ತಿದ್ದ ವಾಹಿನಿಗಳು ಒಂದೆಡೆಯಿದ್ದರೆ, 'ಬಹುಮತ ಸಾಬೀತುಪಡಿಸಿಕೊಳ್ಳಲು ಯೆಡಿಯೂರಪ್ಪನವರು ಹೀಗೆಲ್ಲ ಮಾಡಬೇಕಾಗುತ್ತದೆ' ಅಂತನ್ನುವ ಚಿತ್ರವಿಚಿತ್ರವಾದ ಖತರನಾಕ್ ಐಡಿಯಾಗಳನ್ನು ಇನ್ಯಾರೋ ಪರದೆ ಮೇಲೆ ಪ್ರಚುರಪಡಿಸುತ್ತಿದ್ದರು. 
ಇದೆಲ್ಲದರಿಂದ ರೋಸೆದ್ದು ಹೋದ ನನಗೆ ಕೊಂಚ ತಂಪೆರೆದಿದ್ದು ಇಳಿಸಂಜೆಯ ಮಳೆಯ ಜೊತೆಗೆ ಒಂದಿಷ್ಟು ಹಾಯ್ಕುಗಳು. ಅವೆಲ್ಲ ಮಕ್ಕಳ ಮೇಲೆ ಕಟ್ಟಲಾದ ಹಾಯ್ಕು ಚಿತ್ರಣಗಳು. ಇಂಗ್ಲೀಷ್ ನಲ್ಲಿ ಚಿತ್ರಿಸಲಾದ ಇವೆಲ್ಲ ಕ್ಷಣಗಳನ್ನು ನಾನು ಹಾಯ್ಕುವಿನ ಕೋಮಲ ರೂಪದಲ್ಲಿ ಸೆರೆಹಿಡಿಯಲಾಗದೇ ಹೀಗೆ ಗದ್ಯದ ಮೊರೆಹೋಗುತ್ತಿದ್ದೇನೆ.

   ಒಂದು ಚಿತ್ರಣ ಹೀಗಿದೆ. ಅದೊಂದು ಮಕ್ಕಳ ಕ್ಲಿನಿಕ್. ಅಲ್ಲಿರುವ ವೇಟಿಂಗ್ ರೂಮಿನಲ್ಲಿ ಐದಾರು ಮಕ್ಕಳು ಅವರವರ ಪಾಲಕರೊಂದಿಗೆ ತಮ್ಮ ಪಾಳಿಗಾಗಿ ಕಾಯುತ್ತಲಿವೆ. ಅಲ್ಲಿನ E.N.T ತಜ್ಞ ಇನ್ನೂ ಕ್ಲಿನಿಕ್ಕಿಗೆ ಬಂದಂತಿಲ್ಲ. ವೇಟಿಂಗ್ ರೂಮಿನ ಒಂದು ಮಗು. ಅದರ ಅಪ್ಪನಿಗೆ ಮಗುವಿನ ದೃಷ್ಟಿದೋಷದ ಬಗ್ಗೆ ಗುಮಾನಿ ಬಂದಿದೆ. ಆದರೆ ‘ಎಲ್ಲ ಸರಿಯಿದೆ'  ಅಂತ ಆತನಿಗೆ ತಿಳಿಹೇಳುವವರ್ಯಾರು? ಮಗು ಚಿಕ್ಕದು. ಮಾತು ಬಾರದು. ಹೀಗಾಗಿ ಇಲ್ಲಿಗೆ ದೌಡಾಯಿಸಿದ್ದಾನೆ. ಪಾಳಿಗಾಗಿ ಚಡಪಡಿಸುತ್ತಿದ್ದಾನೆ. ಅಷ್ಟರಲ್ಲೇ ಅಪ್ಪನ ಕಣ್ಣಳತೆಯಿಂದ ಜಾರಿರುವ ಮಗು ತೆವಳುತ್ತ ಹೋಗಿ ಏನು ಮಾಡುತ್ತಲಿದೆ? ಮೂಲೆಯಲ್ಲಿರುವ ಕಣ್ಣು ಪರೀಕ್ಷಿಸುವ ಪುಟ್ಟಯಂತ್ರದ ರಾವುಗಾಜಿನ ಮೇಲೆ ಪೆನ್ಸಿಲ್ ನಿಂದ ಚಿತ್ತುಕಾಟು ಹಾಕುತ್ತಲಿದೆ.                 

   ಅದೇ ಕೋಣೆಯ ಇನ್ನೊಂದು ಮಗು. ಅದರ ಅಪ್ಪನಿಗೆ ಇನ್ನೆಂಥದ್ದೋ ಗುಮಾನಿ. ಹಾಗಾಗಿ ಕ್ಲಿನಿಕ್ಕಿಗೆ ಬಂದಿರುವರು. ಕುಶಾಲಿಗೆಂದು ಗೋಡೆಯ ಮೇಲೆ ತೂಗು ಹಾಕಿರುವ ಗಿಟಾರ್. ಮಗುವಿನ ಗಮನ ಸೆಳೆಯಲೆಂದು ಗಿಟಾರ್ ಹಿಡಿದಿರುವ ಅಪ್ಪ ಒಂದೊಂದಾಗಿ ಸ್ವರ ಮೀಟುತ್ತಿದ್ದಾನೆ. ಮೂರನೇ ತಂತಿಯಲ್ಲಿನ ಸ್ವರ ಹೊರಬರುತ್ತಿದ್ದಂತೆಯೇ ಮಗುವಿನ ಹಸ್ತ ನಿಧಾನವಾಗಿ ತಂತಿಯನ್ನು ಮುಟ್ಟುತ್ತ ಗಿಟಾರಿನ ಸದ್ದನ್ನಡಗಿಸುತ್ತಿದೆ. ಆ ಮೂಲಕ ಅಪ್ಪನ ಸಂದೇಹವನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದೆ. ಸಮಾಧಾನದ ಈ ಹೊತ್ತಿನಲ್ಲಿ ಅಪ್ಪನ ಬೆರಳುಗಳು ತಂತಿಗಳನ್ನು ಅವಿರತವಾಗಿ ಇನ್ನೂ 
ಮೀಟುತ್ತಲೇ ಇವೆ; ಶಬ್ದವೇಧಿ ಮಗು ಹಸ್ತದಿಂದ ಸ್ವರಸ್ತಂಭನ ಮಾಡುತ್ತಲೇ ಇದೆ. 

   ಅಸಲಿ ಮಜ ಇಲ್ಲಿದೆ ನೋಡಿ. ಕ್ಲಿನಿಕ್ಕಿನಿಂದ ಅನತಿ ದೂರದಲ್ಲೇ ಮಸಣವೊಂದು ಇದ್ದಂತಿದೆ. ಅಲ್ಲೀಗ ಯಾವುದೋ ಅಂತ್ಯಕ್ರಿಯೆ ನಡೆಯುತ್ತಿದೆ. ಅಲ್ಲಿರುವ ದೊಡ್ಡವರು ಗಂಭೀರವಾಗಿಯೋ ಶೋಕತಪ್ತರಾಗಿಯೋ ಅಂತ್ಯಕ್ರಿಯೆಯ ಚಟುವಟಿಕೆಯಲ್ಲಿ ವ್ಯಸ್ತರಾಗಿರುವಾಗ ಮಕ್ಕಳ ದಂಡೊಂದು ಅಕ್ಕಪಕ್ಕದ ಗೋರಿಗಳನ್ನು ಬಳಸಿಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಆಹ್! ಇಲ್ಲಿ ಯಾವುದು ಅರ್ಥಪೂರ್ಣ? ಯಾವುದು ಅರ್ಥಹೀನ?

ಯಾಕೆಂದರೆ ಇಲ್ಲಿ ಈಗ ತಾನೇ ಕಂಡಿದ್ದ ಮುಖ ನಾಳೆ ಮತ್ತೇ ಕಾಣಬಹುದೆನ್ನುವ ಖಾತ್ರಿ ಯಾರಿಗಿದೆ?                 
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 23.05.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)


4 comments:

ದೀಪಾ ಜೋಶಿ said...

ಅದ್ಭುತ ದೃಶ್ಯಕಾವ್ಯವನ್ನು ಆಸ್ವಾದಿಸಿದಂಥ ಅನುಭವವುಂಟಾಯಿತು."ಕಣ್ಣಳತೆಯಿಂದ ಜಾರಿಹೋಗಿರುವ ಮಗು ಕಣ್ಣು ಪರೀಕ್ಷಾ ಯಂತ್ರದ ರಾವುಗಾಜಿನ ಮೇಲೆ ಚಿತ್ತುಕಾಟು ಹಾಕುತ್ತಿದೆ"ವ್ಯಕ್ತಿ,ವಸ್ತು,ಸ್ಥಿತಿಗಳನ್ನು ಏಕಸೂತ್ರದಲ್ಲಿ ತೊಡಕದಂತೆ ನೀವು ಕಟ್ಟುವ ಪರಿ ಅದ್ಭುತ ಜೋಶಿಯವರೇ."ಶಬ್ಧವೇಧಿ ಮಗು ಹಸ್ತದಿಂದ ಸ್ವರ ಸ್ತಂಭನ ಮಾಡುತ್ತಿದೆ" ವಾಹ್,ಇಲ್ಲಂತೂ ಶಬ್ದಜಾಲದ ಮಾಂತ್ರಿಕನಂತೆ ತೋರುತ್ತೀರಿ.ಕೊನೆಯದಾಗಿ ಮಸಣದ ಚಿತ್ರಣದಲ್ಲಿ ಈಗ ತಾನೇ ಕಂಡಿದ್ದ ಮುಖ ನಾಳೆ ಕಂಡೀತೆಂಬ ಖಾತ್ರಿಯೆಲ್ಲಿದೆ,ಎಂಬಲ್ಲಿ ವಿಷಾದದ ಎಳೆಯೊಂದು ಮೀಟಿದರೂ ಮಕ್ಕಳ ಆಟದ ದೃಶ್ಯವನ್ನು ಕಟ್ಟಿಕೊಟ್ಟು ವಿಷಾದವನ್ನೂ ಸಹ್ಯವಾಗಿಸಿದ್ದೀರಾ. ಅಭಿನಂದನೆಗಳು

sunaath said...

ನಿಮ್ಮ ಈ ಲೇಖನವನ್ನೇ ಒಂದು ಹಾಯ್ಕು ಎಂದು ಕರೆದರೆ ತಪ್ಪಿಲ್ಲ!

ರಾಘವೇಂದ್ರ ಜೋಶಿ said...

ದೀಪಾ ಮ್ಯಾಡಂ,
ನಿಮ್ಮ ಪ್ರೀತಿಯ ಮಾತುಗಳನ್ನು ಕೇಳಿ ಖುಷಿಯಾಯಿತು.
ಧನ್ಯವಾದಗಳು

ರಾಘವೇಂದ್ರ ಜೋಶಿ said...

ಸುನಾಥ ಸರ್,
ನಿಮ್ಮ ಇಂದಿನ ಪ್ರೋತ್ಸಾಹಕ್ಕೆ ಧನ್ಯವಾದ.