Wednesday, April 25, 2018

ಗಂಧದ ಮರದೊಳು ಒಂದಿನಿತೂ ಫಲವಿಲ್ಲ!

ಮೊನ್ನೆ ಸುಮ್ಮನೇ ಹೀಗೇ ಏನನ್ನೋ ಓದುತ್ತಿದ್ದಾಗ ಗಝಲ್ ರೂಪದ ಒಂದಿಷ್ಟು ಸಾಲುಗಳು ಗೋಚರಿಸಿದವು. ಅಸಲಿಗೆ ಇದನ್ನು ಮೂಲದಲ್ಲಿ ಬರೆದವರು ಯಾರೆಂದು ನನಗೆ ಗೊತ್ತಾಗಲಿಲ್ಲವಾದರೂ ಕನ್ನಡಕ್ಕೆ ಇದನ್ನು ರೂಪಾಂತರ ಮಾಡಬಹುದು ಅಂತನಿಸಿತು. ಪರಿಪೂರ್ಣತೆಯನ್ನು ಹುಡುಕುತ್ತ ಹೊರಟ ಈ ಅನಾಮಿಕ ಕವಿಗೆ ಕೊನೆಗೆ ಕಂಡಿದ್ದಾದರೂ ಏನು?     

ಹೊನ್ನಿಗೆ ಪರಿಮಳವಿಲ್ಲ 
ಕಬ್ಬಿಗೆ ಪುಷ್ಪವಿಲ್ಲ
ಗಂಧಮರದೊಳು ಒಂದಿನಿತೂ ಫಲವಿಲ್ಲ;
ರಾಜನಿಗೆ ದೀರ್ಘಾಯುವಿಲ್ಲದ 
ಪಂಡಿತನಲ್ಲಿ ಕಾಂಚಾಣವಿಲ್ಲದ
ಈ ಲೋಕದೊಳಗೆ ಪರಿಪೂರ್ಣತೆ 
ದಕ್ಕುವ ಜಾಗವೇ ಬಲು ಮಜವಾಗಿದೆ. 
ಅಲ್ಲಿ, ನೆಲ ಕೆಳಕ್ಕೆ ಜಾರುತ್ತಿರುತ್ತದೆ;
ಆಕಾಶ ಮೇಲಕ್ಕೆ ಹಾರುತ್ತಿರುತ್ತದೆ..

   ಅಲ್ಲಿಗೆ ಅದೊಂದು ಮರೀಚಿಕೆ. ಯಾರಿಗೂ ದಕ್ಕದೇ ಇರುವಂಥದ್ದು. ಇಷ್ಟಕ್ಕೂ ಪರ್ಪೆಕ್ಟ್ ಅಂತನ್ನುವ ಯಾವುದಾದರೂ ಈ ಸೃಷ್ಟಿಯಲ್ಲಿ ಇದೆಯೇ? ನಮ್ಮ ಪೌರಾಣಿಕ ರೋಲ್ ಮಾಡೆಲ್ ಗಳಾದ ರಾಮ ಮರ್ಯಾದಾ ಪುರುಷೋತ್ತಮನಾದ. ಪರಶುರಾಮ ಚಿರಂಜೀವಿಯಾದ. ಕೃಷ್ಣ ಜಗದ್ಗುರುವಾದ. ಆದರೆ ಇವರ್ಯಾರೂ ಪರಿಪೂರ್ಣರಾಗಲಿಲ್ಲ. ಹಾಗಾದರೆ ಪರಿಪೂರ್ಣತೆ ಅನ್ನುವದು ಎಲ್ಲಿ ಸಿಗುತ್ತದೆ?         
    
   ಯಾರೋ ಇಂಥ ಪ್ರಶ್ನೆ ಕೇಳಿದಾಗಲೆಲ್ಲ ನಕ್ಕು ಬಿಡುತ್ತೇವೆ. ಯಾಕೆಂದರೆ ನಾವೆಲ್ಲ ಹುಲುಮಾನವರು. ಒಂದು ಸಂಬಂಧದಿಂದ ಕಳಚಿಕೊಳ್ಳಲು ನಮಗೆ ಜಾಸ್ತಿ ಹೊತ್ತು ಬೇಕಿಲ್ಲ. ನಮ್ಮ ಅಂಗಳದಲ್ಲೊಂದು ಗೆರೆ ಹೊಡೆಯಲು ಸಿಕ್ಕಂಥ ಕಾರಣಗಳೂ ಅಷ್ಟೇ ತಮಾಷೆಯವು. ಇಲ್ಲಿ, ಕೇಳಿದಾಗ ಸಾಲ ಕೊಡಲಿಲ್ಲ ಅಂತ ಮಾತು ಬಿಟ್ಟವರಿದ್ದಾರೆ. ಕೊಟ್ಟ ಸಾಲವನ್ನು ವಾಪಸ್ಸು ಕೇಳಿದರು ಅಂತ ಮಾತು ಬಿಟ್ಟವರಿದ್ದಾರೆ. ಫೇಸ್ ಬುಕ್ಕಿನಲ್ಲಿ ಎಲ್ಲರಿಗೂ ಲೈಕ್ ಮಾಡಿ ನನ್ನ ವಾಲಿಗೇ ಬರೋದಿಲ್ಲ ಅಂತ ಮಾತು ಬಿಟ್ಟವರಿದ್ದಾರೆ. 'ಕವಿತೆಗೆ ಪ್ರಾಮಾಣಿಕ ಅಭಿಪ್ರಾಯ ಬೇಕು' ಅಂತ ಪೀಡಿಸಿ ಪೀಡಿಸಿ, ಕೊನೆಗೊಮ್ಮೆ ಅಭಿಪ್ರಾಯ 
ಹೇಳಿದ್ದಕ್ಕೂ ಮಾತು ಬಿಟ್ಟವರಿದ್ದಾರೆ! ಹೀಗೆ ಯಾವುದ್ಯಾವುದೋ ಚಿಲ್ಲರೆ ಕಾರಣಗಳಿಗೆ ಮನಸು ಮಾಲಿಂಗ 
ಹೃದಯ ಶಂಭುಲಿಂಗವಾಗಿಬಿಡುವ ಹೊತ್ತಿನಲ್ಲಿ ಊರಿನ ಬಾಲ್ಯದ ಮಿತ್ರ ನೆನಪಾಗುತ್ತಾನೆ. ಆತನಿಗೊಂದು 
ಫೋನಾಯಿಸಿ ಕಾಲೆಳೆಯುತ್ತಿರುತ್ತೇನೆ: 
"ನೀನ್ಯಾವ ಲೋಕದ ಪ್ರಾಣಿ ಮಾರಾಯ, ಒಮ್ಮೆಯೂ ಮಾತು ಬಿಡಲಿಲ್ಲವಲ್ಲ? ಊರಾಚೆಯ ಬಯಲಿಗೆ ಸಂಡಾಸಕ್ಕೆಂದು ಹೋಗುವಾಗ ನಿನಗೆ ಒತ್ತಡವಿಲ್ಲದಿದ್ದರೂ ನನ್ನೊಂದಿಗೆ ಬರುತ್ತಿದ್ದೆ. ಪ್ರತೀ ಬಾರಿಯೂ ಚೊಂಬನ್ನು ನೀನೇ ಹೊರುತ್ತಿದ್ದೆ. ಆ ಹತ್ತಾರು ವರ್ಷ ಯಕಶ್ಚಿತ್ ಖಾಲಿ ತಂಬಿಗೆಯನ್ನಾದರೂ ಒಮ್ಮೆಯೂ ನನಗೆ ದಾಟಿಸಲಿಲ್ಲವಯ್ಯ.."

   ಇಬ್ಬರೂ ನಗುತ್ತಿರುತ್ತೇವೆ. ಇದನ್ನೇ ನಾನು ಹಿತಾನುಭವ ಅಂತ ಕರೆಯುತ್ತೇನೆ. ನಮ್ಮ ಸುತ್ತಲಿನ ಒಂದಿಡೀ ಪರಿಸರ ಇಂಥದೊಂದು ಹಿತಾನುಭವ ಕಂಡುಕೊಳ್ಳಲು ಒಂದು ಸೂತ್ರದ ಅಗತ್ಯ ಇದೆ ಅಂತ ನನಗೆ ಆಗೀಗ ಅನಿಸುತ್ತಿರುತ್ತದೆ. ಆ ಸೂತ್ರದ ಹೆಸರು 'ಫಿಫ್ಟಿ-ಫಿಫ್ಟಿ'. ಮೊದಲ ನೋಟಕ್ಕೆ ಇದೊಂದು ತಮಾಷೆಯ ಮತ್ತು ಜಾಳುಜಾಳಾದ ಸೂತ್ರ ಅಂತನಿಸಬಹುದು. ಬಾಲ್ಯದಲ್ಲಿ ಬಯಲ ಬಹಿರ್ದೆಸೆಗೆಂದು ವರ್ಷಗಟ್ಟಲೇ ನೀರಿನ ತಂಬಿಗೆ ತಾನೊಬ್ಬನೇ ಹೊತ್ತುಕೊಂಡ ಸ್ನೇಹಿತ ನನಗೇನೋ ಅಷ್ಟರಮಟ್ಟಿಗೆ ಹಿತಾನುಭವ ದಯಪಾಲಿಸಿದ. ಆ ಮೂಲಕ ಆ ಘಳಿಗೆಯ ನಮ್ಮಿಬ್ಬರ ಪರಿಸರದಲ್ಲಿ ಸಮಸ್ಯೆಯೊಂದು ಪರಿಹಾರವಾಯಿತು. ಜಗತ್ತಿನಲ್ಲಿ ಥೇಟ್ ಇದೇ ಥರ ಆಯಾ ಕ್ಷಣಕ್ಕೆ ಆಯಾ ಪರಿಸರದ ಸಮಸ್ಯೆ ಪರಿಹಾರವಾಗುತ್ತಿರುತ್ತದೆ. ಕೈಸುಟ್ಟರೂ ಸಮಯಕ್ಕೆ ಸರಿಯಾಗಿ ಗಂಡನ ಲಂಚ್ ಬಾಕ್ಸ್ ಕಟ್ಟುವ ಗೃಹಿಣಿ, ಬಾಸ್ ಒತ್ತಡಕ್ಕೆ ತನ್ನದಲ್ಲದ ಕೆಲಸವನ್ನೂ ಮಾಡುವ ಸಹೋದ್ಯೋಗಿ, ಕಾಲೇಜಿನಲ್ಲಿ ಜಗಳವಾದಾಗ ಸಹಾಯ(?)ಕ್ಕೆಂದು ನಾಲ್ವರನ್ನು ಕರೆತರುವ ಗೆಳೆಯ, ಮ್ಯಾನೇಜರ್ ನ ವಾಂಛೆಯನ್ನು ಧಿಕ್ಕರಿಸುತ್ತಲೇ ಇದ್ದೊಂದು ನೌಕರಿಯನ್ನು ನಾಜೂಕಾಗಿ ನಿಭಾಯಿಸುತ್ತಿರುವ ಹುಡುಗಿ- ಇವರೆಲ್ಲ ಆಯಾ ಕ್ಷಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿರುತ್ತಾರೆ.  

   ಹೀಗೆ ಎದುರಿಗಿದ್ದವರ ಅವಶ್ಯಕತೆ ಅರ್ಥೈಸಿಕೊಂಡು ಆಯಾ ಸಮಯಕ್ಕೆ ಪರಿಹಾರ ಒದಗಿಸಿದ ವ್ಯಕ್ತಿ 
ಆ ಒಟ್ಟು ಪರಿಸರಕ್ಕೇನೋ ಒಂದು ಹಿತಾನುಭವ ಒದಗಿಸಿದ. ಆದರೆ ಈ ಹಿತಾನುಭವ ಜಗತ್ತಿನ ಕೇವಲ 50% ಜನಕ್ಕೆ ಮಾತ್ರ. ಅಂದರೆ, ಜಗತ್ತಿನ 50% ಸಮಸ್ಯೆ ಮಾತ್ರ ಪರಿಹಾರವಾಗಿದೆ. ಇನ್ನರ್ಧ ಹಾಗೇ ಉಳಿದು ಹೋಗಿದೆ. ಯಾಕೆಂದರೆ ಸರಳವಾದ ಸೂತ್ರವೊಂದನ್ನು ನಾವು ಮರೆತು ಹೋಗಿದ್ದೇವೆ. ಅಸಲಿಗೆ, ನಮಗೇನು ಬೇಕಿದೆ  ಅಂತ ಅರ್ಥೈಸಿಕೊಂಡು ಅದಕ್ಕನುಗುಣವಾಗಿ ತಮ್ಮ ಕೈಲಾದ ಪರಿಹಾರ ಒದಗಿಸಿದವರಿಗೆ ನಾವು ಯಾವತ್ತೂ 'ನಿನಗೇನು ಬೇಕಿದೆ?' ಅಂತ ಕೇಳಲಿಲ್ಲ. ಹಾಗೆ ಕೇಳಿ ಸ್ಪಂದಿಸುವ 
ಮೂಲಕ ಇಡೀ ಲೋಕಕ್ಕೆ 100% ಹಿತಾನುಭವ ಕೊಡುವ ಸರಳ ಲೆಕ್ಕವನ್ನು ನಾವು ಮರೆತುಬಿಟ್ಟೆವಾ? 

   ಹಾಗೆ ಲೆಕ್ಕ ಮರೆತಿದ್ದರಿಂದಲೇ ಇವತ್ತೇನಾಯಿತು? ಜೋರು ಬಾಯಿ ಇರುವ ಮನುಷ್ಯ ಮಾತ್ರ ಎಲ್ಲರಿಗೂ 
ಕಾಣುತ್ತಿದ್ದಾನೆ. ಮೆಲುದನಿಯಲ್ಲಿ ಮಾತನಾಡುವ ವ್ಯಕ್ತಿ ಯಾರಿಗೂ ಕಾಣಿಸುತ್ತಿಲ್ಲ. ಬರವಣಿಗೆಯಿಂದಲೇ 
ಮಾತನಾಡಬೇಕಿದ್ದ ಸಾಹಿತಿಗಳೂ ನಾಲಿಗೆಯಿಂದಲೇ ಕೂಗು ಹಾಕುತ್ತಾರೆ. ಪ್ರಶಸ್ತಿ ಪಡೆಯುವದರಲ್ಲೂ ಪ್ರಶಸ್ತಿ ಹಿಂತಿರುಗಿಸುವದರಲ್ಲೂ ಮಾತಿನದ್ದೇ ಅಬ್ಬರ. ಅದರ ಮುಂದುವರಿಕೆಯಾಗಿ ಒಬ್ಬರಿಗೇ ಹತ್ತಾರು ನಮೂನೆಯ 
ಪ್ರಶಸ್ತಿಗಳು, ಫಲಕಗಳು, ತೂಕದ ಚೆಕ್ಕುಗಳು!

   ಅದೇ ರೀತಿ ಸಾಹಿತಿಗಳಿಗೆ ಕೊಡಮಾಡುವ ಪ್ರಶಸ್ತಿಗಳ ಬಗ್ಗೆಯೂ ನನಗೆ ಅಸಮಾಧಾನವಿದೆ. ಸರ್ಕಾರವೂ 
ಸೇರಿದಂತೆ ನಮ್ಮಲ್ಲಿರುವ ಅನೇಕ ಬಗೆಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆಯಬೇಕೆಂದರೆ ಸಾಹಿತಿಯೊಬ್ಬ ತನ್ನ ಕೃತಿಗಳನ್ನು ಆಯಾ ಸಂಘಟಕರಿಗೆ ಕಳುಹಿಸಿಕೊಡಬೇಕು. ನೀವು ಕೊಡಮಾಡುವ ಪುರಸ್ಕಾರಕ್ಕೆ ನನ್ನ ಕೃತಿಯನ್ನೂ ಪರಿಗಣಿಸಿ ಅಂತೆಲ್ಲ ಅರ್ಜಿ ಸಲ್ಲಿಸಬೇಕು. ಸಂಕೋಚ ಮತ್ತು ಮುಜುಗರಗಳನ್ನೇ ಇಂಧನವಾಗಿಸಿಕೊಳ್ಳಬೇಕಿದ್ದ ಸಾಹಿತಿ ಹೀಗೆ ಭಿಡೆಯಿಲ್ಲದೇ ಅರ್ಜಿ ಗುಜರಾಯಿಸುವದನ್ನು ನೋಡಿ  ಪೆಚ್ಚಾಗಬೇಕೋ ಅಥವಾ ಪಿಚ್ಚೆನ್ನಬೇಕೋ? 

   ಹೀಗಾಗಿ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಬಗ್ಗೆ, ಅದರ ಅಧ್ಯಕ್ಷರುಗಳ ಬಗ್ಗೆ ಎಷ್ಟೇ ಗೌರವ, ಹೆಮ್ಮೆಗಳಿದ್ದರೂ ಒಂದು ಸಣ್ಣ ಅಸಮಾಧಾನವಿದೇ. ಬಹುಶಃ ನನಗಿರುವ ಈ ಆಸೆ ದುಬಾರಿಯಾಗಿರುವಂಥದ್ದು. "ಸಮ್ಮೇಳನದ ಅಧ್ಯಕ್ಷನಾಗಿ ಈ ಸಾರೋಟು, ಕಾರು, ತೇರು, ಎತ್ತಿನಬಂಡಿ, ತೆರೆದ ಜೀಪುಗಳಲ್ಲಿ ಹಾರ ಹಾಕಿಸಿಕೊಂಡು ಕೈ ಬೀಸುತ್ತ ಊರೆಲ್ಲ ಮೆರವಣಿಗೆ ಮಾಡಿಸಿಕೊಳ್ಳುವದೆಂದರೆ ಪ್ರಾಣ ಹೋದಂತಾಗುತ್ತೆ ಕಣ್ರೀ, ಸಾಹಿತ್ಯದ ಭಾಷಣ, ನಿರ್ಣಯ, ಠರಾವುಗಳೇನೋ ಓಕೆ, ಆದರೆ ಇದೊಂದು ಮುಜುಗರದ ಕೆಲಸಕ್ಕೆ ಮಾತ್ರ ನನ್ನನ್ನು ಒತ್ತಾಯಿಸಬೇಡಿ.." ಅಂತ ಸಂಘಟಕರಿಗೆ ರೋಪು ಹಾಕುವ ಅಧ್ಯಕ್ಷರನ್ನು ನೋಡುವಾಸೆಯಿದೆ! 

   ಒಟ್ಟಿನಲ್ಲಿ ಕೃತಿಯನ್ನು ಆಸ್ವಾದಿಸುವದರೊಂದಿಗೆ ಅದರ ಕರ್ತೃವನ್ನೂ ಹೆಗಲಿಗೇರಿಸಿಕೊಳ್ಳುವಷ್ಟು ಓದುಗನನ್ನು ಸಹೃದಯಿಯನ್ನಾಗಿಸಿದ್ದು ಸಾಹಿತ್ಯದ ಮೇರುಗುಣ. ಆದರೆ ಅದೇ ಸಾಹಿತ್ಯ ಅಂಥದೊಂದು ಹೆಗಲನ್ನು ನಯವಾಗಿ ನಿರಾಕರಿಸುವಂತೆ ಕರ್ತೃವಿಗೆ ಸೂಚಿಸದೇ ಹೋದದ್ದು ವ್ಯಂಗ್ಯ.

   ಹೀಗಿರುವಾಗ ಗದುಗಿನ ಶಿಕ್ಷಕರೊಬ್ಬರು ನೆನಪಾಗುತ್ತಿದ್ದಾರೆ. ಹೆಸರು: ಬಿ.ಜಿ. ಅಣ್ಣಿಗೇರಿ. ಎಂಭತೈದಕ್ಕೂ 
ಮೀರಿ ವಯಸ್ಸಾಗಿರಬೇಕು ಅವರಿಗೆ. ಗದುಗಿನ 'ಮಾಡೆಲ್ ಹೈಸ್ಕೂಲ್' (ಇವತ್ತಿನ ಸಿ.ಎಸ್. ಪಾಟೀಲ್ 
ಪ್ರೌಢಶಾಲೆ)ನಲ್ಲಿ ನಾನು ಒಂಭತ್ತನೇ ತರಗತಿ ಓದುತ್ತಿದ್ದಾಗಲೇ ಅವರು ಅದೇ ಶಾಲೆಯ ಹೆಡ್ ಮಾಸ್ಟರ್ 
ಆಗಿ ನಿವೃತ್ತರಾದರು. ಅದಕ್ಕೂ ಸುಮಾರು ಇಪ್ಪತೈದು ವರ್ಷ ಮೊದಲೇ ಅವರು ಗದುಗಿನ ಸುತ್ತಲಿದ್ದ 
ಹಳ್ಳಿಗಳ ಬಡ ವಿದ್ಯಾರ್ಥಿಗಳಿಗೆಂದು ಆಶ್ರಮ ತೆರೆದವರು. ಅಲ್ಲಿ ಉಚಿತವಾಗಿ ವಿದ್ಯೆಯ ಜೊತೆಗೆ ಊಟ, 
ವಸತಿಯನ್ನೂ ನೀಡಿದವರು. ನಾನು ಹೈಸ್ಕೂಲ್ ಮುಗಿಸಿಯೇ ಹತ್ತತ್ತಿರ ಮೂರು ದಶಕಗಳಾಗಿವೆ. 
ಅವಿವಾಹಿತ ಅಣ್ಣಿಗೇರಿ ಮೇಷ್ಟ್ರು ಇವತ್ತಿಗೂ ಟ್ಯುಷನ್ನು, ಕ್ಲಾಸು ಅಂತ ಛಡಿ ಹಿಡಿದು ನಿಂತೇ ಇದ್ದಾರೆ. 

   ಶಿಕ್ಷಕ ವೃತ್ತಿಯಲ್ಲಿದ್ದಾಗ ಸಂಪೂರ್ಣ ಸಂಬಳವನ್ನೂ, ಈಗ ಪಿಂಚಣಿ ಹಣವನ್ನೂ ಆಶ್ರಮದ 
ವಿದ್ಯಾರ್ಥಿಗಳಿಗೆ ಎತ್ತಿಟ್ಟಿರುವ ಅಣ್ಣಿಗೇರಿಯಂಥ ಸಂತ ಶಿಕ್ಷಕರಿಗೆ ಎಲ್ಲಿದೆ ಸಾರೋಟು? ಎಲ್ಲಿದೆ ತೆರೆದ 
ಜೀಪಿನ ಮೆರವಣಿಗೆ? ಹೆಚ್ಚುಕಡಿಮೆ ಮೂರು ಪೀಳಿಗೆಯ ವಿದ್ಯಾರ್ಥಿಗಳಿಗೆ ಪುಕ್ಕಟೆಯಾಗಿ ವಿದ್ಯೆ ಹಂಚಿ 
ಆಶ್ರಯ ಕೊಟ್ಟ ಈ ಮೇಷ್ಟ್ರ ಮುಖ ಎಷ್ಟು ಟೀವಿ ಚಾನಲ್ಲುಗಳಲ್ಲಿ ಬಂದಿದೆ? ಆರಂಭದ ಅನಾಮಿಕ ಕವಿಯ ಮತ್ತದೇ ಕವಿತೆಯನ್ನು ಗುನುಗುಡುವದಾದರೆ,  

ಹೊನ್ನಿಗೆ ಪರಿಮಳವಿಲ್ಲ, 
ಕಬ್ಬಿಗೆ ಪುಷ್ಪವಿಲ್ಲ,
ಗಂಧಮರದೊಳು ಒಂದಿನಿತೂ ಫಲವಿಲ್ಲ.. 

ಅರೇ, ತನ್ನನ್ನು ತಾನು ಆಕರ್ಷಿಸಿಕೊಳ್ಳಲು ಚಿನ್ನಕ್ಕೆ ಪರಿಮಳದ ಆಸರೆಯಾದರೂ ಯಾಕಿರಬೇಕು?    
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 25.04.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, April 11, 2018

ಪುಕ್ಕಟೆ ಜಾತ್ರೆಯಲ್ಲಿ ಒಂದು ಸೊಬಗನ್ನು ತೋರಿದವನು..


"ಚುನಾವಣೆಗಳಿಗೂ ಮಠಗಳಿಗೂ ಏನು ಸಂಬಂಧ?" 
ಮೊನ್ನೆ ಹಿರಿಯ ಸ್ನೇಹಿತರೊಬ್ಬರು ಕೇಳುತ್ತಿದ್ದರು. ಅವರ ಪ್ರಶ್ನೆಯಲ್ಲಿ ಅರ್ಧ ಗೇಲಿಯಿತ್ತು, ಅರ್ಧ ಸಿಟ್ಟಿತ್ತು. ನಮಗೆಲ್ಲ ಗೊತ್ತಿದೆ: ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆ ಎಲ್ಲ ಪಕ್ಷಗಳ ಧುರೀಣರು ಹತ್ತಾರು ಮಠಗಳತ್ತ ದೌಡಾಯಿಸುವದು, ಅಲ್ಲಿನ ಹಿರಿ, ಕಿರಿ ಸ್ವಾಮೀಜಿಗಳ ಕಾಲಿಗೆ ಬೀಳುವದು, ಒಂದಿಷ್ಟು ಹಾರ-ಶಾಲುಗಳ ವಿನಿಮಯ ಮತ್ತು ಇವೆಲ್ಲದರ ಕುರಿತಂತೆ ಮರುದಿನ ಪತ್ರಿಕೆಗಳಲ್ಲಿ ಚಿತ್ರಸಮೇತ ವರದಿ. 

   ಸ್ನೇಹಿತರ ಪ್ರಶ್ನೆ ತಾತ್ವಿಕವಾಗಿತ್ತು. ಇಷ್ಟಕ್ಕೂ ಈ ಹಿರಿಯರೇನೂ ಮುಗ್ಧರಲ್ಲ. ಅವರು ಒಂದು ಸಮತೋಲಿತ ಸಮಾಜದ ನಿರ್ಮಾಣದಲ್ಲಿ ಮಠ, ಮಂದಿರ, ಮಸೀದಿಗಳ ಅವಶ್ಯಕತೆಗಳನ್ನು ಅರಿತವರು. ದೇಗುಲಗಳಲ್ಲಿರಬಹುದಾದ ‘ಹೀಲಿಂಗ್ ಪವರ್ 'ನ್ನು ಮನಗಂಡವರು. ಲೌಕಿಕವಾದ ಮನುಷ್ಯನ ಶ್ರಮಕ್ಕೆ ಒಮ್ಮೊಮ್ಮೆ ಬೆಲೆ ಸಿಗದೇ ಹೋದಾಗ ಆತ ಅಲೌಕಿಕ ಪವಾಡಗಳನ್ನು ನಿರೀಕ್ಷಿಸುತ್ತಾನಂತೆ. ಆತನಿಗೆ ಅದೊಂದು ತಾತ್ಕಾಲಿಕ ಶಮನವಷ್ಟೇ. ಅಷ್ಟಕ್ಕೇ ಅದನ್ನು ಮೂಢನಂಬಿಕೆ ಅಂತ ಕರೆದರೆ ಆ ಮನುಷ್ಯನ ಶ್ರಮವನ್ನು ಅವಮಾನಿಸಿದಂತೆ.

   ಹೀಗಿರುವಾಗ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ವಾಮೀಜಿ, ಸಂತರೆನಿಸಿಕೊಂಡವರು ಇಂತಿಂಥ ಅಭ್ಯರ್ಥಿ ಮತ್ತು ಇಂತಿಂಥ ಪಕ್ಷವನ್ನೇ ಬೆಂಬಲಿಸಬೇಕೆಂದು ಸಮಾಜಕ್ಕೆ ನೇರಾನೇರವಾಗಿ ಕರೆ ಕೊಡತೊಡಗುತ್ತಾರೆ. ಇಲ್ಲಿ ಚುನಾವಣಾ ಅಭ್ಯರ್ಥಿಯನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ ಆತ ಗೆಲ್ಲಲೆಂದು ಎಲ್ಲ ದಾರಿಗಳನ್ನೂ ಬಳಸಿಕೊಳ್ಳುತ್ತಾನೆ.

   ಆದರೆ ಸಂತರು, ಸ್ವಾಮೀಜಿಗಳು ಹಾಗಲ್ಲವಲ್ಲ? ಅವರು ಒಂದರ್ಥದಲ್ಲಿ ಎಲ್ಲವನ್ನೂ ತ್ಯಜಿಸಿದವರು. ಇನ್ನೊಂದರ್ಥದಲ್ಲಿ ಎಲ್ಲರನ್ನೂ ಅಪ್ಪಿಕೊಂಡವರು. ಒಂದು ಸ್ವಾರ್ಥದ್ದು; ಇನ್ನೊಂದು, ನಿರ್ವ್ಯಾಜ ಪ್ರೇಮದ್ದು. ಇದು ಅವರ ಪರಂಪರೆ. ಹಾಗಂತ ಭಾವಿಸಿಕೊಂಡೇ ಸಂತನ ಸನ್ನಿಧಿಗೆ ಕಾಲಿಡುವ ಭಕ್ತನಿಗೆ ಭಾರತದಂಥ ದೇಶದಲ್ಲಿ ಚುನಾವಣೆ ಎಂಬುದು ಎಷ್ಟು ಮುಖ್ಯ,  ಅದರಲ್ಲೂ ಓಟು ಮಾರಿಕೊಳ್ಳದೇ ಪ್ರತಿಯೊಬ್ಬರೂ ಮತ ಹಾಕುವಂಥ ಪ್ರಕ್ರಿಯೆ ಎಷ್ಟು ಮುಖ್ಯ ಅನ್ನುವ ತಿಳುವಳಿಕೆ ಮೂಡಿಸಬೇಕಿದ್ದ ನಮ್ಮ ಮಠ, ದೇಗುಲಗಳು ನಿರ್ದಿಷ್ಟ ಚುನಾವಣಾ ಅಭ್ಯರ್ಥಿಗಳ ಬೆಂಬಲಿಗರಂತೆ ಹೇಳಿಕೆ ಕೊಡುವದು ಎಂಥ ವಿಪರ್ಯಾಸ. 

   ಒಟ್ಟಿನಲ್ಲಿ ಸಮಾಜದ ಮನಸ್ಥಿತಿಯನ್ನು ತನ್ನದೇ ಆದ ಒಂದು ಅಲೌಕಿಕ ಸೂತ್ರದಡಿ ಮುನ್ನಡೆಸಬೇಕಿದ್ದ ಮಠ, ಮಂದಿರಗಳು ಹೀಗೆ ಚುನಾವಣಾ ಭರಾಟೆಯಲ್ಲಿ ತಾವೂ ಒಂದು ಭೌತಿಕ ಪ್ರಚಾರ ಸಾಮಗ್ರಿಯಂತೆ ಪ್ರಚುರಪಡಿಸಿಕೊಳ್ಳುತ್ತಿರುವಾಗ, ಈ ನಮ್ಮ ರಾಜಕೀಯ ಪಕ್ಷಗಳು ಅದು ಹೇಗೆ ಗಂಭೀರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಬಲ್ಲವು? ಮೊದಲೆಲ್ಲ ರಾಜಕಾರಣಿಗಳಿಗೆ ಸಣ್ಣಸಣ್ಣ ದುರಾಸೆಗಳಿದ್ದವು. ಹೆಚ್ಚೆಂದರೆ, ಒಂದು ಪಕ್ಷದಲ್ಲಿ ನೆಲೆ ಸಿಗಲಿಲ್ಲವೆಂದರೆ ಆತ ಇನ್ನೊಂದು ಪಕ್ಷಕ್ಕೆ ವಲಸೆ ಹೋಗುತ್ತಿದ್ದ. ಹಾಗೆ ಮತ್ತೊಂದು ಪಕ್ಷಕ್ಕೆ ಕಾಲಿಡುತ್ತಲೇ ವರ್ಷದ ಹಿಂದಷ್ಟೇ ಸಮಾ ಬೈದಾಡಿಕೊಂಡಿದ್ದ ವ್ಯಕ್ತಿಗೇ ಒಂಚೂರೂ ಮುಜುಗರವಿಲ್ಲದೆ ಹಾರ ಹಾಕುತ್ತಿದ್ದ. 

   ಇವತ್ತು ಕಾಲ ಬದಲಾಗಿದೆ. ಯುದ್ಧವೂ ಬದಲಾಗಿದೆ. ಹಾಗಾಗಿ ಇಲ್ಲಿ ಹೊಸತೊಂದು ಧರ್ಮ ಹುಟ್ಟಲು ಯಾರಿಗೂ ಸಾಕ್ಷಾತ್ಕಾರವಾಗಬೇಕಿಲ್ಲ. ಪ್ರಾಂತೀಯ ಅಸ್ಮಿತೆಯನ್ನು ಜಾಗ್ರತಗೊಳಿಸಲು ಯಾವ ಟ್ರಿಗರಿಂಗ್ ಸಂದರ್ಭವೂ ಬೇಕಿಲ್ಲ. ಒಂದೇ ಒಂದು ಚುನಾವಣಾ ಘೋಷಣೆ ಸಾಕು: ಅದು ಇಬ್ಬರ ಮಧ್ಯೆ ನವಿರಾಗಿ ಪಲ್ಲವಿಸುತ್ತಿದ್ದ ಪ್ರೇಮವನ್ನು ಹೊಡೆದುಹಾಕುತ್ತದೆ. ಧರ್ಮವನ್ನು ಒಡೆದುಹಾಕುತ್ತದೆ. ಇದರ ಮುಂದುವರಿಕೆಯಾಗಿ, ಕನ್ನಡವನ್ನು ಎತ್ತಿ ಹಿಡಿಯುವೆ ಅಂತೆಲ್ಲ ಒಂದಿಡೀ ಪುಟ ಜಾಹಿರಾತು ಕೊಡುವ ಅಭ್ಯರ್ಥಿಗೆ ಅಲ್ಲೇ ಇಪ್ಪತ್ತೆಂಟು ವ್ಯಾಕರಣ ದೋಷಗಳಿರುವದು ಕಾಣಿಸುವದೇ ಇಲ್ಲ. ಇದೆಲ್ಲದರ ಮಧ್ಯೆ ಪುಕ್ಕಟೆ ಸಾಮಾನುಗಳ ಜಾತ್ರೆ ಬೇರೆ! 

   ಇಷ್ಟಕ್ಕೂ ಉದ್ಯೋಗ, ಶ್ರಮ, ಅನ್ನ ಮತ್ತು ಜೀರ್ಣವಾಗುವಿಕೆ ಅನ್ನುವದೆಲ್ಲ ಮನುಷ್ಯನ ಜೀವನಚಕ್ರ. ಅದು ಆತನ ಜೀವಂತಿಕೆಯ ಕುರುಹು. ಅದನ್ನು ಮರೆತವರು ಮಾತ್ರ ಪುಕ್ಕಟೆ ಸಾಮಾನು ಕೊಡುವ ಪ್ರಣಾಳಿಕೆ ಕೊಡಬಲ್ಲರು. ಇಂಥ ಅಭ್ಯರ್ಥಿಗಳಿಗೆ ಕಳಶವಿಟ್ಟಂತೆ ಮೊನ್ನೆ (ವಿಕ ವರದಿ: ಏಪ್ರಿಲ್ 7) ಸ್ವತಂತ್ರ ಅಭ್ಯರ್ಥಿಯೊಬ್ಬ 'ನಾನ್ಯಾಕೆ ಎಂಎಲ್ಲೆ ಆಗಬಾರದು?' ಅಂತನ್ನುವ ಹೆಡ್ಡಿಂಗ್ ಕೊಟ್ಟು ಸಿದ್ಧಪಡಿಸಿದ್ದ ಆತನ ಪ್ರಣಾಳಿಕೆಯಲ್ಲಿದ್ದ ಬಾಣಗಳನ್ನು ಗಮನಿಸಿ: ಕ್ಷೇತ್ರದ ಮಹಿಳೆಯರಿಗೆ ಪುಕ್ಕಟೆಯಾಗಿ ಹವೀಜ, ಖಾರದಪುಡಿ ಮತ್ತು ಉಪ್ಪಿನಕಾಯಿ. ಎಲ್ಲರಿಗೂ ವಾರಕ್ಕೆರಡು ಸಲ ಮಾಂಸ ಸೇರಿದಂತೆ ದಿನಕ್ಕೆ ಮೂರೊತ್ತು ಊಟ, ಎರಡೊತ್ತು ಕಾಫಿ/ಟೀ. ವಯಸ್ಕರಿಗೆ ತಿಂಗಳ ಲೆಕ್ಕದಲ್ಲಿ ಮದ್ಯ ಫ್ರೀ, ಹಬ್ಬಗಳಿಗೆ ಬಟ್ಟೆ ಫ್ರೀ, ಬಸ್ ಟಿಕೆಟ್ ಫ್ರೀ, ಜೊತೆಗೆ ಮೊಬೈಲ್ ಕರೆಯೊಂದಿಗೆ ಡೇಟಾ ಫ್ರೀ! 

   ಇಂಥವೇ ಪುಕ್ಕಟೆಗಳ ಪ್ರಣಾಳಿಕೆ ಹಿಡಿದು ಬರುವ ಪಕ್ಷಗಳಿಗೆ ನಾವು ಪ್ರಶ್ನಿಸಲೇಬೇಕಿದೆ: ಅಲ್ಲ ಸ್ವಾಮೀ, ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯೇನೋ ಕಟ್ಟಿಸುತ್ತೀರಿ. ಆದರೆ ರೋಗವೇ 
ಬರದಂತೆ ಮಾಡಲು ಏನಾದರೂ ಯೋಜನೆ ಇದೆಯಾ? ಒಂದಾದರೂ ಸರ್ಕಾರಿ ಜಿಮ್? ಸರ್ಕಾರಿ ಗರಡಿಮನೆ? ಒಂದಿಷ್ಟು ಸುಗಮ ಸಂಚಾರ? ಉಸಿರಾಡಲು ಒಂದಿಷ್ಟು ಶುದ್ಧಗಾಳಿ? ನಿಮ್ಮದೇ ಸ್ಕೂಲಿನ ಮಕ್ಕಳಿಗೆ ಆಟವಾಡಲೆಂದು ಒಂದೆರೆಡು ಚೆಂಡು? ಅಲ್ಲ ಸ್ವಾಮೀ, ಊರಾದರೂ ಅಷ್ಟೇ ರಬ್ಬರಾದರೂ ಅಷ್ಟೇ, ಹಿಗ್ಗುವಿಕೆಗೆ ಒಂದು ಮಿತಿಯುಂಟಲ್ಲವಾ? ಇರುವ ಒಂದು ಬೆಂಗಳೂರನ್ನೇ ಎಷ್ಟು ಅಂತ ಹಿಗ್ಗಿಸುವದು? ದೂರದ ಗುಲ್ಬರ್ಗ, ರಾಯಚೂರು, ಹುಬ್ಬಳ್ಳಿಯ ಹುಡುಗನಿಗೆ ತಾನು ಕಲಿತ ವಿದ್ಯೆಗೆ ತಕ್ಕಂತೆ ತನ್ನೂರಿನಲ್ಲೇ ಕೆಲಸ ಸಿಗುವದಾದರೆ ಬೆಂಗಳೂರಿಗಾದರೂ ಯಾಕೆ ಬಂದಾನು? ನಿಮ್ಮ ಜೋಳಿಗೆಯಲ್ಲಿ ಇದಕ್ಕೇನಾದರೂ ಜಾಗವುಂಟೋ? ಬಹುಶಃ ಇಂಥವೇ 
ತಕರಾರುಗಳಿಗೆ ನಮ್ಮ ಪಕ್ಷಗಳಲ್ಲಿ ಉತ್ತರವಿಲ್ಲ. ಅಷ್ಟರಮಟ್ಟಿಗೆ ಅವು ಕೆಟ್ಟು ಹೋದಂತಿವೆ.

   ಇಂಥವರ ಮಧ್ಯೆ ಊರಿನ ಚುನಾವಣಾ ತಮಾಷೆ ನೆನಪಾಗುತ್ತಿದೆ. ಊರಲ್ಲಿ ಮುನ್ಸಿಪಾಲ್ಟಿ ಅಥವಾ ವಿಧಾನಸಭಾ ಚುನಾವಣೆಯಿರಲಿ, ಘೋಷಣೆಯಾಗುತ್ತಿದ್ದಂತೆ  ಒಬ್ಬ ಆಸಾಮಿ ತಪ್ಪದೇ ಸ್ಪರ್ಧೆಗೆ ನಿಲ್ಲುತ್ತಿದ್ದ. ಕೇವಲ ನಾಲ್ಕಡಿ ಎತ್ತರವಿದ್ದ ಆತ ಸ್ವತಂತ್ರ ಅಭ್ಯರ್ಥಿಯಾಗಿರುತ್ತಿದ್ದ. ಹಿಂದೆಮುಂದೆ ಹಿಂಬಾಲಕರನ್ನು ಕಟ್ಟಿಕೊಂಡು ಓಡಾಡುವ ಶಕ್ತಿ ಇರದ ಈ ನಮ್ಮ ಆಸಾಮಿ ಧೋತರ ಕಟ್ಟಿಕೊಂಡು ಒಬ್ಬನೇ ಪ್ರಚಾರ ಮಾಡುತ್ತಿದ್ದ. ರಾತ್ರಿಯಾದರೆ ಸಾಕು, ತನ್ನ ಹೆಸರನ್ನು ಕೊರೆಯಲಾಗಿದ್ದ ತಗಡಿನ ಶೀಟ್ ಮತ್ತು ಇದ್ದಿಲಿನ ಪುಡಿಯನ್ನು ಹಾಕಿದ ನೀರಿನ ಬಕೆಟ್ ಹಿಡಿದುಕೊಂಡು ಒಬ್ಬನೇ ಮುಗುಮ್ಮಾಗಿ ತಿರುಗುತ್ತಿದ್ದ. ಬೆಳಗೆದ್ದು ನೋಡಿದರೆ ಸುಣ್ಣ ಹೊಡೆಸಿಕೊಂಡ ನೂರಾರು ಮನೆಗಳ 
ಗೋಡೆ, ಕಾಂಪೌಂಡುಗಳ ಮೇಲೆಲ್ಲ ಈ ಪುಣ್ಯಾತ್ಮ ಇದ್ದಿಲು ಪುಡಿಯನ್ನೂ ತಗಡಿನ ಶೀಟನ್ನೂ ಬಳಸಿ ತನ್ನ ಮತವನ್ನು ಯಾಚಿಸಿರುತ್ತಿದ್ದ! ಎರಡು ಸಲ ನೀರು ಹಾಕಿದರೆ ತೊಳೆದುಹೋಗುತ್ತಿದ್ದ ಈತನ ಪ್ರಚಾರಕಾರ್ಯದ ಬಗ್ಗೆ ಜನ ಬಿದ್ದುಬಿದ್ದು ನಗುತ್ತಿದ್ದರು. ಕುಶಾಲಿಗೆಂದು  ತಮ್ಮತಮ್ಮ ಏರಿಯಾಗಳಿಗೆ ಕರೆಸಿ, ಮಲ್ಲಿಗೆಮಾಲೆ ಹಾಕುತ್ತಿದ್ದರು. ತನಗೆಂದು ಹಾಕಿದ್ದ ಕುರ್ಚಿಯ ಮೇಲೇರಿ ಸಿಕ್ಕಸಿಕ್ಕಂತೆ ಭಾಷಣ ಮಾಡುತ್ತಿದ್ದ. ಗಾಂಧೀ ಟೋಪಿ ಧರಿಸುತ್ತಿದ್ದ ಈ ನಾಲ್ಕಡಿ ಆಸಾಮಿ ಭಾಷಣ ಮಾಡುತ್ತಿದ್ದಾಗಲೇ ಯಾರೋ ತಲೆಯ ಮೇಲೆ ನೀರು ಸುರಿದಾಗಲೂ ಧೃತಿಗೆಡದೇ ಮುಂದುವರೆಯುತ್ತಿದ್ದ. ಹುಚ್ಛೆದ್ದ ಜನರ ಕರತಾಡನ. 

   ಎದುರಾಳಿಗಳು ಈ ಭೂಪನನ್ನ ಕಡೆಗಣಿಸುವಂತಿರಲಿಲ್ಲ. ಎಲ್ಲಿ ಮತಗಳನ್ನು ಒಡೆಯುತ್ತಾನೋ ಎಂಬ ಭಯದಲ್ಲಿ ಅವರಿಂದ ಧಮ್ಕಿಯೋ ವಿನಂತಿಯೋ ಬರುತ್ತಿತ್ತು. ಅಷ್ಟೇ! ಸರಿಯಾಗಿ ನಾಮಪತ್ರ ಹಿಂತೆಗೆಯುವ ದಿನದಂದು ನಾಮಪತ್ರ ಹಿಂತೆಗೆದುಕೊಳ್ಳುತ್ತಿದ್ದ. ಮರುದಿನ ಯಥಾಪ್ರಕಾರ 
ಮಾರ್ಕೆಟ್ಟಿನ ಜನಜಂಗುಳಿಯ ಮಧ್ಯೆ ತನ್ನದೊಂದು ಛತ್ರಿಯನ್ನು ತಲೆಕೆಳಗಾಗಿ ಹರವಿ, ಅದರಲ್ಲೊಂದಿಷ್ಟು ಪಾಕೀಟುಗಳನ್ನು ಇಟ್ಟುಕೊಂಡು ಎಂದಿನಂತೆ ಕೂಗು ಹಾಕುತ್ತಿದ್ದ: 
'ತಗೋರೀ, ತಗೋರೀ, ತಿಗಣೆಪುಡಿ, ಜಿರಳೆಪುಡಿ, ಇಲಿ ಪಾಶಾಣ..'                
            
   ಹೀಗೆ ತನ್ನ ಅಸಡ್ಡಾಳ ವರ್ತನೆಗಳಿಂದ ಕಂಗೊಳಿಸುತ್ತಲೇ ನಮ್ಮಂಥ ಅಬ್ಬೇಪಾರಿಗಳಿಗೆ ಆತ ತೋರಿಸಿಕೊಟ್ಟಿದ್ದು ಪ್ರಜಾಪ್ರಭುತ್ವದ ಸೊಬಗು ಮತ್ತು ಶಕ್ತಿಗಳನ್ನು ಮಾತ್ರ. ಚುನಾವಣೆ ಎಂಬುದು ಇಂಥ ತಮಾಷೆಗಳಿಂದ ಹಿಡಿದು ಇವತ್ತಿನ ಪುಕ್ಕಟೆ ಜಾತ್ರೆಯವರೆಗೂ ತೇಲಿ ಬಂದಿದೆ. ಇಲ್ಲೀಗ ಬಹುತೇಕರು ತಮ್ಮತಮ್ಮ ಜಾತಿ-ಧರ್ಮದ ಸಮೇತ ಒಂದಿಲ್ಲೊಂದು ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿರುವಾಗ ದೇಶದ ಜನತೆ ಒಂದು ನದಿಯಂತೆ ಯೋಚಿಸಬೇಕಿದೆ. ನದಿಯಂತೆ ವರ್ತಿಸಬೇಕಿದೆ. ಹೀಗಿರುವಾಗ, ಸಂದರ್ಭಕ್ಕೆ ಒಪ್ಪುತ್ತದೋ ಬಿಡುತ್ತದೋ, ಹಳೆಯ ಕವಿತೆಯೊಂದನ್ನು ನಿಮಗೆ ತೋರಿಸಬೇಕೆನಿಸುತ್ತಿದೆ:
                                                  
ಎಲ್ಲೋ ಬೆಟ್ಟದ ನೆಲ್ಲಿಕಾಯಿ ಬುಡದಲ್ಲಿ
ಹುಟ್ಟುವ ನದಿಗೆ ಭಾಷೆ ಬಾರದು.
ತೊದಲುತ್ತಲೇ ಇಳಿಜಾರಿನಲ್ಲಿ ಧುಮುಕುವ 
ಜಲಪಾತಕ್ಕೆ ಹದಿಹರೆಯದ ಗುಂಗು. 

ಭೋರ್ಗರೆದು ಪ್ರಪಾತಕ್ಕಿಳಿದ ಮೇಲೆ ಕಂಡಿದ್ದೇನು:
ಯೌವನದ ಶಾಂತ ಮನಸೇ?
ಮಿಥುನ ತಂದಿಟ್ಟ ನಿಷ್ಕ್ರೀಯತೆಯೇ?
ಅಂಕುಡೊಂಕಾಗಿ ಅತ್ತಿಂದಿತ್ತ ಹರಿದಾಡುವ 
ನದಿಗೆ ಗೊತ್ತು ಗುರಿಯಿಲ್ಲ
-ಅಂತ ಹೇಳಿದವರೇ ಇಲ್ಲಿ ಅವಶೇಷವಾದರು. 

ಮುಠ್ಠಾಳರಾ, ನದಿ ಯಾವಾಗಲೂ ಒಂದು
ಅಗೋಚರ ಸೆಳೆತಕ್ಕಾಗಿ ನಡೆಯುತ್ತಲೇ ಇರುತ್ತದೆ;
ಒಂದೋ ಆಕಾಶದಡೆಗೆ ಅಥವಾ ಸಾಗರದೆಡೆಗೆ.
-
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 11.04.2018 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)