Wednesday, May 24, 2017

ಮರಣದಂಡನೆಗೊಳಗಾದ ನಾಯಿ ಮತ್ತು ಪಳಗಿಸಲಾಗದ ಹುಲಿ!


ಳೆದ ವಾರದ ಈ ಘಟನೆಯ ಬಗ್ಗೆ ನೀವೂ ಓದಿರಬಹುದು. ಪಾಕಿಸ್ತಾನದ ಪಂಜಾಬಿನ ಭಕ್ಕರ್ ಜಿಲ್ಲೆಯಲ್ಲಿನ ಅಸಿಸ್ಟಂಟ್ ಕಮಿಷನರ್ ರಾಜಾ ಮೊಹಮ್ಮದ್ ಸಲೀಂ ಒಂದು ವಿಚಿತ್ರ ಶಿಕ್ಷೆ ವಿಧಿಸಿದರು. ನ್ಯಾಯದಾನದ ಪ್ರಕ್ರಿಯೆ ಮುಗಿಸುವ ಭರದಲ್ಲಿ ಕೋರ್ಟಿನ ಕಟಕಟೆಯಲ್ಲಿದ್ದ ನಾಯಿಗೆ ಮರಣದಂಡನೆಯನ್ನು ವಿಧಿಸಿಬಿಟ್ಟರು. ವಿಚಿತ್ರವೆಂದರೆ, ಮಗುವೊಂದನ್ನು ಕಚ್ಚಿ ಗಾಯಗೊಳಿಸಿದ ಆರೋಪದಡಿಯಲ್ಲಿ ಈ ನಾಯಿ ಈಗಾಗಲೇ ಒಂದು ವಾರದ ಜೈಲು ಶಿಕ್ಷೆಯನ್ನೂ ಅನುಭವಿಸಿತ್ತು! ಅದಾದ ಮೇಲೆ ಈ ಮರಣದಂಡನೆಯ ಪ್ರಹಾರ. ಈಗ ಈ ನಾಯಿಯ ಮಾಲೀಕ ಜಲೀಲ್ ತನ್ನ ನಾಯಿಯನ್ನು ಉಳಿಸಿಕೊಳ್ಳುವದಕ್ಕಾಗಿ ಪಾಕಿಸ್ತಾನದ ಎಲ್ಲ ಕೋರ್ಟುಗಳ ಬಾಗಿಲು ತಟ್ಟುವದಾಗಿ ಹೇಳಿಕೆ ಕೊಟ್ಟಿದ್ದಾನೆ.

   ವಿಚಿತ್ರ ನೋಡಿ, ನ್ಯಾಯಾಂಗ ವ್ಯವಸ್ಥೆ ಅಂತನ್ನುವದು ಮನುಷ್ಯನ ಸಾಮಾಜಿಕ ಬದುಕಿನಲ್ಲಿ ಒಂದು ಶಿಸ್ತು ತರುವದಕ್ಕಾಗಿ ಹುಟ್ಟಿಕೊಂಡಿದ್ದು. ಆದರೆ ಕೋರ್ಟಿನ ಕಟಕಟೆಗಳಲ್ಲಿ ಮನುಷ್ಯನ ಬದಲಿಗೆ ಈ ಥರ ಪ್ರಾಣಿಗಳನ್ನು ಹಿಡಿದು ನಿಲ್ಲಿಸಿದ್ದು ಜಗತ್ತಿನ ಇತಿಹಾಸದಲ್ಲೆಡೆ ಇದ್ದಂತಿದೆ. ಪ್ರಾಣಿಗಳಲ್ಲದೇ ಕ್ರಿಮಿಕೀಟಗಳನ್ನೂ ನೂರಾರು ವರ್ಷಗಳ ಹಿಂದೆಯೇ ಹೀಗೆ ಯೂರೋಪಿನ ಧರ್ಮಾಧಾರಿತ ನ್ಯಾಯಾಲಯದ ಅಂಗಳದಲ್ಲಿ ನಿಲ್ಲಿಸಿ ಶಿಕ್ಷಿಸಲಾಗಿದೆ. ಅತಿ ಕಾಮುಕತೆಗೆ(?)ಒಳಗಾಗಿತೆಂದು ಹೆಣ್ಣುಕತ್ತೆ, ಹಂದಿಗಳನ್ನೆಲ್ಲ ಹೀಗೆ ಮರಣದಂಡನೆಗೆ ಗುರಿಪಡಿಸಲಾಗಿದೆ. ಇಂಥ ಹಲವಾರು ಪ್ರಕರಣಗಳ ಬಗ್ಗೆ (The Criminal Prosecution and Capital Punishment of Animals, 1906)ಬಗ್ಗೆ ವಿಕಿಪೀಡಿಯ ತನ್ನ ಪುಟದಲ್ಲಿ ವಿವರಗಳನ್ನು ದಾಖಲಿಸಿಕೊಂಡಿದೆ. 

   ಇಂಥದ್ದನ್ನೆಲ್ಲ ನೋಡಿದಾಗ ನಗು ಬರುತ್ತದೆ. ಪುರಾತನ ಕಾಲದಲ್ಲಿದ್ದ ಮನುಷ್ಯನ ಮಿದುಳಿಗೂ, ವರ್ತಮಾನದ ನಮ್ಮ ಯೋಚನಾಕ್ರಮಕ್ಕೂ ವ್ಯತ್ಯಾಸ ಬೇಡವೇ? ಒಂದು ತಾಲೂಕಿನ ಆಡಳಿತವನ್ನು ನಿಭಾಯಿಸುವಷ್ಟು ಸಮರ್ಥ ಮಿದುಳನ್ನು ಹೊಂದಿರುವ ಒಬ್ಬ ಅಸಿಸ್ಟಂಟ್ ಕಮಿಷನರ್ ಯಾರನ್ನೋ ಕಚ್ಚಿ ಗಾಯಗೊಳಿಸಿತು ಅಂತನ್ನುವ ಕಾರಣಕ್ಕೆ ಸದರಿ ನಾಯಿಗೆ ಮರಣದಂಡನೆ ವಿಧಿಸುತ್ತಾನೆ ಅಂತಾದರೆ ನಮ್ಮ ಕಾಮನ್ ಸೆನ್ಸ್ ಎಲ್ಲಿ ಸತ್ತುಹೋಗಿದೆ ಅಂತ ಹುಡುಕಬೇಕೆನಿಸುತ್ತದೆ. 

   ಇಲ್ಲೊಂದು ತಮಾಷೆ ನೆನಪಾಗುತ್ತಿದೆ. ಇದನ್ನು ಹೇಳಿದವನು ಯಾರು ಅಂತ ಯಾರಿಗೂ ಸರಿಯಾಗಿ ಗೊತ್ತಿದ್ದಂತಿಲ್ಲ. ಒಬ್ಬರು ಲಾವೋ ತ್ಸು ಹೇಳಿದ್ದು ಅಂದರೆ, ಇನ್ಯಾರೋ ಕನ್ ಫ್ಯೂಶಿಯಸ್ ಹೇಳಿದ್ದು ಅನ್ನುತ್ತಾರೆ. ಮತ್ಯಾರೋ ಇದು ಹಾಯ್ಕು ಮಾಸ್ಟರ್ ಬಾಶೋನ ಮಾತು ಅನ್ನುವದುಂಟು. ಒಟ್ಟಿನಲ್ಲಿ ಒಂದು ತಮಾಷೆ ಮಾತು ನಮ್ಮ ವರ್ತಮಾನದ ಬಹುತೇಕ  ಘಟನೆಗಳಿಗೆ ತಾರ್ಕಿಕ ಪರಿಹಾರ ನೀಡಿರುವದಂತೂ ನಿಜ. ಇಷ್ಟಕ್ಕೂ ಆ ಮಾತಿನ ಅರ್ಥ ಮಜವಾಗಿದೆ: 
“ಸೊಳ್ಳೆಯೊಂದು ಮನುಷ್ಯನ ವೃಷಣದ ಮೇಲೆ ಬಂದು ಕುಳಿತಾಗಲೇ ಜಗತ್ತಿನ ಬಹುತೇಕ ಸಮಸ್ಯೆಗಳಿಗೆ ಹಿಂಸಾರೂಪದ ಶಿಕ್ಷೆಯೊಂದೇ ಪರಿಹಾರವಲ್ಲ ಅಂತನ್ನುವ ಸತ್ಯ ಗೋಚರಿಸತೊಡಗುತ್ತದೆ..”
                                                                        *
   ನಮ್ಮಲ್ಲೀಗ ಹೊಸ ತಮಾಷೆ ಶುರುವಾದಂತಿದೆ. ದಿನಬೆಳಗಾದರೆ ನಮ್ಮ ನಾಯಕರು ದಲಿತರ ಮನೆಗಳಲ್ಲಿ ತಟ್ಟೆ ಹರಡಿಕೊಂಡು ಊಟಕ್ಕೆ ಕೂರುತ್ತಿದ್ದಾರೆ. ಈ ಆಟದಲ್ಲಿ ಯಾವ ನಾಯಕನೂ ಹಿಂದೆ ಬಿದ್ದಂತಿಲ್ಲ. ಅಷ್ಟಕ್ಕೂ ದಲಿತರ ಮನೆಯಲ್ಲಿ ಊಟ ಮಾಡುವದರಿಂದ ಸಾಮಾಜಿಕವಾಗಿ ಹಿಂದುಳಿದವರ ಬದುಕಿಗೆ ಹೇಗೆ ಲಾಭವಾಗುತ್ತದೆ ಅಂತನ್ನುವದು ನನಗಂತೂ ಅರ್ಥವಾಗದ ಸಂಗತಿ. ಅಷ್ಟಾದರೂ ಈ ನಾಯಕರು ಒಬ್ಬರ ಮೇಲೆ ಒಬ್ಬರು ಸ್ಪರ್ಧೆಗೆ ಬಿದ್ದವರಂತೆ ದಲಿತರ ಮನೆಗೆ ದೌಡಾಯಿಸುತ್ತಿದ್ದಾರೆ. ಮನೆಯೊಳಗಿರುವ ನಾಯಕನಿಗೆ ತನ್ನದು ದಲಿತರ ಬಗ್ಗೆ ಪ್ರೀತಿ ಅಂತನಿಸುತ್ತಿದ್ದರೆ, ಹೊರಗೆಲ್ಲೋ ಪತ್ರಿಕಾಗೋಷ್ಠಿ ನಡೆಸುತ್ತಿರುವ ವಿರೋಧಿ ನಾಯಕನಿಗೆ ಅದೊಂದು ನಾಟಕದಂತೆ ತೋರುತ್ತಿರುತ್ತದೆ. ಮರುದಿನ ಈ ಇಬ್ಬರೂ ನಾಯಕರ ಸ್ಥಾನ ಬದಲಾಗುತ್ತದೆ. ಅಲ್ಲಿದ್ದ ನಾಯಕ ಇಲ್ಲಿರುತ್ತಾನೆ. ಇಲ್ಲಿದ್ದ ನಾಯಕ ಅಲ್ಲಿರುತ್ತಾನೆ. ಮಾತುಗಳು ಕೂಡ ಅದಲುಬದಲಾಗಿರುತ್ತವೆ. 

   ಅಚ್ಚರಿಯೇನಿಲ್ಲ. ಊರಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಅಜ್ಜಿಯೊಬ್ಬಳು ಥೇಟ್ ಹೀಗೇ ಇದ್ದಿದ್ದು. ಮನೆಯಲ್ಲಿ ಯಾರಾದರೂ ಓಡಾಡುವಾಗ ಅವರ ಕಾಲು ತಾಕಿ ನೀರು ತುಂಬಿಟ್ಟಿದ್ದ ನೀರಿನ ಲೋಟ ನೆಲದ ಮೇಲೆ ಉರುಳಿಬಿದ್ದರೆ ಮುದುಕಿ ರೌದ್ರಾವತಾರ ತಾಳುತ್ತಿದ್ದಳು. 'ಓಡಾಡುವಾಗ ನಿಮಗೆಲ್ಲ ಕಣ್ಣು ಕಾಣಿಸಲ್ವೇನ್ರೋ?' ಅಂತ ಸಿಕ್ಕಂತೆ ಬಯ್ಯುತ್ತಿದ್ದಳು. ಯಾಕೆಂದರೆ ಅಲ್ಲಿ ಲೋಟ ಇಟ್ಟಿದ್ದು ಇದೇ ಅಜ್ಜಿ. ಆದರೆ ಇದೇ ಮುದುಕಿ ತಾನು ಓಡಾಡುವಾಗ ಹುಷಾರು ತಪ್ಪಿ ಅದೇ ಲೋಟ ಬೀಳಿಸಿದ್ದರೆ ಅವಳ ವರಸೆ ಬೇರೆಯಾಗುತ್ತಿತ್ತು. "ಜನ ಓಡಾಡುವ ಜಾಗದಲ್ಲಿ ನೀರಿನ ಲೋಟ ಇಡ್ತೀರಲ್ಲಪ್ಪ, ಬುದ್ಧಿ ಬ್ಯಾಡವಾ ನಿಮಗೆ?" ಅಂತ ನಮಗೇ ತಿರುಮಂತ್ರ ಹಾಕುತ್ತಿದ್ದಳು! 
ದಲಿತರ ಮನೆಯಲ್ಲಿ ಊಟಕ್ಕೆ ಕುಳಿತವರು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಹೇಳಿಕೆ ಕೊಡುತ್ತಿರುವವರು- ಇಬ್ಬರೂ ಊರಲ್ಲಿ ಮುದುಕಿಯಂತೆ ಕಾಣಿಸುತ್ತಿರುವದರಲ್ಲಿ ವ್ಯಂಗ್ಯವೇನೂ ಇಲ್ಲ.

   ನಿಜ, ತಪ್ಪು ಈ ನಾಯಕರದ್ದಲ್ಲ. ತಪ್ಪು ನಮ್ಮದು. ವರ್ತಮಾನದ ಬಹುತೇಕ ಘಟನೆಗಳಿಗೆಲ್ಲ ಒಂದೋ ತೀರ ಭಾವುಕತೆಯಿಂದಲೋ ಅಥವಾ ತೀರ ಅಸಡ್ಡೆಯಿಂದಲೋ ಪ್ರತಿಕ್ರಿಯಿಸುವ ನಮಗೆ ಮುಂದಿನ ಜನಾಂಗಕ್ಕೆಂದು ಒಂದು ಪ್ರಾಕ್ಟಿಕಲ್ಲಾದ benchmark ಸಿದ್ಧಪಡಿಸಿ ಹೋಗಬೇಕೆಂಬ ತಹತಹವೇ ಇದ್ದಂತಿಲ್ಲ. ನಮಗೆ ವರ್ತಮಾನದ ಮಜದಲ್ಲೇ ಎಲ್ಲ ರೀತಿಯ ತೃಪ್ತಿ ದೊರಕಿದಂತಿದೆ. ಸುಮ್ಮನೇ ಒಂದಿಷ್ಟು ಗಮನಿಸುತ್ತ ಬನ್ನಿ. ಮಾಲ್ ಗಳಲ್ಲಿರುವ ರೆಸ್ಟೋರೆಂಟ್ ಗಳ ಊಟ, ತಿಂಡಿಯ ದರ ನೋಡಿದರೆ ತಲೆ ತಿರುಗುತ್ತದೆ. ಅಲ್ಲಿರುವ ಶರ್ಟು-ಪ್ಯಾಂಟುಗಳ ದರ ನನ್ನನ್ನು ದಂಗು ಬಡಿಸುತ್ತಿದೆ. ಇಷ್ಟಾದರೂ ನಾನು ಆಗಾಗ ಕೊಂಡುಕೊಳ್ಳುತ್ತೇನೆ. ಇದು ಬರೀ ಮಾಲ್ ಗಳ ಕತೆಯಲ್ಲ. ಬೆಂಗಳೂರಿನ ಬಹುತೇಕ ದೊಡ್ಡ ಹೋಟೆಲುಗಳ ದರ, ಸಿನೆಮಾಗಳ ದರ ಸಿಕ್ಕಾಪಟ್ಟೆ ಆಗುತ್ತಿದೆ. ಬ್ರಾಂಡೆಡ್ eat out ಗಳ ಪರಿಸ್ಥಿತಿಯೂ ಅಷ್ಟೇ. 

   ನಾನು ಬರೀ ನನ್ನ ಕತೆ ಮಾತ್ರ ಹೇಳುತ್ತಿದ್ದೇನೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ನನ್ನ ಬೆಳಗಿನ ತಿಂಡಿ, ಕಾಫಿ ಏಳೆಂಟು ರೂ.ಗಳಲ್ಲಿ ಮುಗಿಯುತ್ತಿತ್ತು. ಈಗ? ನಿಜ, ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನರಲ್ಲಿ ದುಡ್ಡೂ ಹರಿಯತೊಡಗಿದೆ. ಆದರೆ ಇವೆಲ್ಲವನ್ನೂ ಮೀರಿ ಎಲ್ಲ ವಸ್ತುಗಳ ದರ ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಮಿತಿಮೀರಿ ಹೆಚ್ಚಾಗಿದೆ. 

   ತಪ್ಪು ಯಾರದು? ಮಾಮೂಲಿ ಕೆಳಮಧ್ಯಮ ವರ್ಗದ ಕುಟುಂಬದಿಂದ ಬಂದ ನಾನು ಅಡ್ಡಹೊತ್ತಿನಲ್ಲಿ ಸ್ವಲ್ಪ ದುಡ್ಡು ನೋಡತೊಡಗಿದ ಮೇಲೆ ವಿಚಿತ್ರ ತೆವಲು ಬಂತು. ಮಾಲ್, ಪಿವಿಆರ್, ಕೆಎಫ್ ಸಿ, ಬೌಲಿಂಗ್, ಯುನೈಟೆಡ್ ಕಲರ್ಸ್, ಡ್ಯೂಡ್, ಕೂಲ್ ಮ್ಯಾನ್- ಇವೆಲ್ಲ ಶಬ್ದಗಳು ಕೊಂಚಮಟ್ಟಿಗೆ ನನ್ನ ತಲೆ ಕೆಡಿಸಿದ್ದಂತೂ ನಿಜ. ಒಂದಿಡೀ ಸಮೂಹಕ್ಕೆ ಮೋಡಿ ಮಾಡಿದ್ದೂ ನಿಜ. ಪರಿಣಾಮ ಏನಾಯಿತು ನೋಡಿ: ಜನರಲ್ಲಿ ದುಡ್ಡು ಹೆಚ್ಚಾಗುತ್ತಿದೆ ಮತ್ತು ಅದರಲ್ಲಿ ಬಹುಪಾಲು ಹಣ ಅರ್ಥವಿಲ್ಲದ ಘನಕಾರ್ಯಗಳಿಗೆ ಬಳಸಲ್ಪಡುತ್ತಿದೆ ಅಂತ ಯಾವಾಗ ಎಲ್ಲರಿಗೂ ಗೊತ್ತಾಯಿತೋ, ಮಾಮೂಲಿ ಅಂಗಡಿಗಳ ಬೆಲೆಯೂ ಏರಿ ಕುಳಿತಿತು. ಮನೆಗಳ ಭಾಡಿಗೆ, ತರಕಾರಿ, ಸಿನೆಮಾ ಟಿಕೆಟ್ಟು ಹಾಳಾಗಲಿ- ಒಂದು ಮಾಮೂಲಿ ಶೋರೂಂನಲ್ಲಿ ನೋಡಿದ ಶರ್ಟು, ಮಾಲ್ ಗಳ ಶೋರೂಂಗಳಲ್ಲಿ ತನ್ನ ಬೆಲೆಯನ್ನು ಎರಡು ಮೂರು ನಾಲ್ಕು ಪಟ್ಟು ಹೆಚ್ಚಿಸಿಕೊಳ್ಳುತ್ತದೆ ಅಂದರೆ ಎಲ್ಲೋ ಏನೋ ಖಂಡಿತ ಎಡವಟ್ಟಾಗುತ್ತಿದೆ.

   ಬೇರೆ ಯಾರೂ ಅಲ್ಲ, ಮುಖ್ಯವಾಗಿ ಇದೆಲ್ಲದರ ತಾಳ ತಪ್ಪಿಸಿದ್ದು ನಾವು. ಹತ್ತು ರೂಪಾಯಿಯ ಇಡ್ಲಿಯನ್ನು ಕುಣಿದಾಡುತ್ತಲೇ ನಲವತ್ತು ತೆತ್ತು ತಿಂದಿದ್ದು ನಾವು. ತೀರ ಕಂಜೂಸ್ ಆಗಬೇಕಿಲ್ಲ, ಆದರೆ ಯಾವುದೇ ವಸ್ತುವಿನ ಅರ್ಹ ಬೆಲೆಗಿಂತ ಜಾಸ್ತಿ ಹಣ ಪಾವತಿ ಮಾಡಲು ಈಗೀಗ ಮನಸ್ಸು ಬರುತ್ತಿಲ್ಲ. ಹಾಗಂತ ಏರಿದ ಹುಲಿಯನ್ನು ಪಳಗಿಸಲೂ ಗೊತ್ತಾಗುತ್ತಿಲ್ಲ. ಹೀಗೆ ಪಳಗಿಸಲಾಗದ ಹುಲಿಯನ್ನೇರಿ ಭವಿಷ್ಯದ ಪ್ರಜ್ಞೆಯನ್ನೇ ಕಳೆದುಕೊಂಡಿರುವ
ಮನುಷ್ಯ ಮತ್ತು ಕಾಮನ್ ಸೆನ್ಸ್ ಇಲ್ಲದೇ ನಾಯಿಗೆ ಮರಣದಂಡನೆ ವಿಧಿಸುವ ಮೂಲಕ ವಾಸ್ತವಿಕ ಪ್ರಜ್ಞೆಯನ್ನೇ ಕಳೆದುಕೊಂಡಿರುವ ಮನುಷ್ಯ-

ಇವರಿಬ್ಬರೂ ಬದಲಾಗುವವರೆಗೂ ನಮ್ಮ ನಾಯಕರ ಊಟ ಮತ್ತು ಗೋಷ್ಠಿ ನಡೆಯುತ್ತಲೇ ಇರುತ್ತವೆ..  
                                                                          -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 24.05.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, May 10, 2017

ಎಲ್ಲವನ್ನೂ ಪುಕ್ಕಟೆ ಕೊಟ್ಟರೂ ಸರಕಾರಿ ಶಾಲೆಗಳೇಕೆ ಹಿಂದೆ?

ಮೊನ್ನೆ ಮಟಮಟ ಮಧ್ಯಾಹ್ನ ಊಟ ಮುಗಿಸಿ ಆಫೀಸಿನತ್ತ ಹೊರಡುತ್ತಿದ್ದೆ. ದಾರಿಯಲ್ಲಿ ಮರದ ಮೇಲಿನ ಧ್ವನಿವರ್ಧಕದಿಂದ ಯಾವುದೋ ಭಜನೆಯ ಹಾಡು  ಜೋರಾಗಿ ಕೇಳಿಸುತ್ತಿತ್ತು. ಮಧ್ಯೆ ಮಧ್ಯೆ ಹಾಡು ನಿಲ್ಲಿಸಿ ಅನ್ನಸಂತರ್ಪಣೆಯ ಬಗ್ಗೆ ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳಲಾಗುತ್ತಿತ್ತು. ಅಲ್ಲೆಲ್ಲೋ ತೇಲಿಬರುವ ತಮಟೆಯ ಸದ್ದು. ತಲೆಯೆತ್ತಿ ಮೇಲಕ್ಕೆ ನೋಡಿದರೆ ಅಲ್ಲೊಂದು ಬ್ಯಾನರ್. ಯಾವುದೋ ದೇವತೆಯ ಹದಿನಾಲ್ಕನೇ ವರ್ಷದ ಉತ್ಸವ. ಸುಡುಗಾಲದ ಬೆವರು ಒರೆಸಿಕೊಳ್ಳುತ್ತ ನಿಧಾನವಾಗಿ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಮೂಡು ಬದಲಿಸಿಕೊಂಡ ಲೌಡ್ ಸ್ಪೀಕರ್ ಮೆಲ್ಲನೇ ಕಿರುಚತೊಡಗಿತು: 
 'ಏನೋ ಮೋಹಾ.. ಏಕೋ ದಾಹಾ..' 
    
   ಧತ್ತೇರಿ ಅಂತ ಗಲಿಬಿಲಿಗೊಂಡೆ. ಈ ಸುಡುಗಾಲದ ಋತುಮಾನಕ್ಕೂ, ಭಕ್ತಶಿಖಾಮಣಿಗಳ ಉತ್ಸಾಹಕ್ಕೂ, ಹಾಡಿನ ಸಂದರ್ಭಕ್ಕೂ ತಾಳೆಹಾಕಲು ಹೋಗಿ ಸೋತು ಹೋದೆ. ಯಾರಿಗೆ ಗೊತ್ತು? ಆ ಹೆಣ್ಣುದೇವತೆಗೂ ಒಂದು ಹೃದಯ ಅಂತ ಇರುತ್ತದಲ್ಲ ಅಂತ ನನ್ನಷ್ಟಕ್ಕೆ ನಾನೇ ನಗಾಡಿಕೊಂಡು ಹೋಗುತ್ತಿರುವಾಗ ಮೊಬೈಲು ರಿಂಗಣಿಸಿತು. ಈ ಹಾಡಿನ ಪರಿಸರದಲ್ಲಿ ಮಾತನಾಡಲಾಗದು ಅಂತ ಜೋರಾಗಿ ಆಫೀಸಿನತ್ತ ಹೆಜ್ಜೆ ಹಾಕತೊಡಗಿದೆ.
*
   ದೂರದ ಹಳ್ಳಿಯೊಂದರಿಂದ ಮಿತ್ರರೊಬ್ಬರು ಕರೆ ಮಾಡಿದ್ದರು. ಸರಕಾರಿ ಪೈಮರಿ ಶಾಲೆಯ ಅಧ್ಯಾಪಕರಾಗಿರುವ ಈ ಮಿತ್ರರು ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ತಮ್ಮ ಶಾಲೆಯ ಮಕ್ಕಳಿಗಾಗಿ ಏನೇನು ಮಾಡಬಹುದೆಂದು ಉತ್ಸಾಹದಿಂದ ವಿವರಿಸುತ್ತಿದ್ದರು. ಮಕ್ಕಳಿಗಾಗಿ ನೋಟ್ ಬುಕ್, ಬ್ಯಾಗ್, ಜಾಮಿಟ್ರಿ ಬಾಕ್ಸ್, ಶೈಕ್ಷಣಿಕ ಪರಿಕರಗಳು, ಆಟದ ಸಾಮಾನುಗಳ ಬಗ್ಗೆ ನಮ್ಮ ಮಾತುಕತೆ ನಡೆಯುತ್ತಿತ್ತು. 

   ಇದು ನಿಜಕ್ಕೂ ನಂಬಲು ಅಸಾಧ್ಯವಾದ ಸಂಗತಿ. ವಿಷಯವೇನೆಂದರೆ, ನಮ್ಮ ಸರ್ಕಾರಿ ಶಾಲೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ನೇಮಕವಾಗುವ ಶಿಕ್ಷಕರೆಲ್ಲ ಅತ್ಯುತ್ತಮ ಗುಣಮಟ್ಟದ ಕ್ಯಾಂಡಿಡೇಟುಗಳು. ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಅಂಕ ಗಳಿಸಿದ ಅಭ್ಯರ್ಥಿಗಳನ್ನೇ ಸರ್ಕಾರಿ ಶಾಲೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹಾಗೆ ನೋಡಿದರೆ, ಸರ್ಕಾರಿ ನೇಮಕಾತಿಯಲ್ಲಿ ಆಯ್ಕೆಯಾಗದ ಮತ್ತು ಕಡಿಮೆ ಅಂಕ ಗಳಿಸಿರುವ ಅಭ್ಯರ್ಥಿಗಳು ಮಾತ್ರ ಖಾಸಗಿ ಶಾಲೆಗಳತ್ತ ಹೋಗುತ್ತಾರೆ. ಮೇಲಾಗಿ, ನಮ್ಮಲ್ಲಿ ಪುಕ್ಕಟೆ ವಿದ್ಯಾಭ್ಯಾಸ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಚಪ್ಪಲಿ/ಶೂ  ವಿತರಿಸಲಾಗುತ್ತದೆ. ಅಷ್ಟಾದರೂ ನಮ್ಮ ಸರ್ಕಾರಿ ಶಾಲೆಗಳು ಖಾಸಗಿಯವರೊಂದಿಗೆ ಯಾಕೆ ಪೈಪೋಟಿ ಮಾಡಲಾಗುತ್ತಿಲ್ಲ? 

   ಇದೇ ಪ್ರಶ್ನೆಯನ್ನು ನನಗೆ ಫೋನಾಯಿಸಿದ ಆ ಶಿಕ್ಷಕ ಮಿತ್ರರಿಗೆ ಕೇಳಿದೆ. ಹಾಗೆ ನೋಡಿದರೆ, ಈ ಮಿತ್ರರು ಸಜ್ಜನರು. ತಮ್ಮ ಶಾಲೆಯ ಬಡ ಮಕ್ಕಳಿಗೆ ಏನಾದರೂ ಮಾಡಿ ಓದಿನ ಹುಚ್ಚು ಮೂಡಿಸುವ ಹಂಬಲ ಉಳ್ಳವರು. ಅದಕ್ಕಾಗಿ ಎಷ್ಟೋ ಸಲ ತಮ್ಮ ಸಹೋದ್ಯೋಗಿಗಳ ಜೊತೆಗೂಡಿ ತಮ್ಮದೇ ದುಡ್ಡುಹಾಕಿ ಮಕ್ಕಳಿಗೆ ಅವಶ್ಯಕವಿರುವ ಸಾಮಗ್ರಿಗಳನ್ನು ತಂದಿದ್ದೂ ಉಂಟು. ಇದೇ ಕಾರಣಕ್ಕಾಗಿ ನಾವು ಒಂದಿಷ್ಟು ಜನ ಸದರಿ ಶಾಲೆಗೆ ಕೆಲವರ್ಷಗಳಿಂದ ಆಟದ ಸಾಮಾನುಗಳಾದ ಫುಟ್ ಬಾಲ್, ವಾಲಿಬಾಲ್, ರಿಂಗ್ ಮುಂತಾದವುಗಳ ಜೊತೆ ಕೆಲ ಶೈಕ್ಷಣಿಕ ಪರಿಕರಗಳನ್ನು ಕೊಡುತ್ತ ಬಂದಿದ್ದೇವೆ. ಜೊತೆಗೆ, ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಗುರಿ ಸಾಧಿಸಿದ ನಾಲ್ಕು ತರಗತಿಯ ಮೂರು ಮೂರು ಮಕ್ಕಳಿಗೆ ಮುಂದಿನ ತರಗತಿಗೆ ಅನುಕೂಲವಾಗುವಂತೆ ಪುರಸ್ಕಾರಗಳನ್ನೂ ನೀಡುತ್ತ ಬಂದಿದ್ದುಂಟು. 

   ವಿಷಯ ಅದಲ್ಲ. ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಸರ್ಕಾರಿ ಶಾಲೆಗಳಿಗೂ ಉಚಿತವಾಗಿ ಪಠ್ಯಪುಸ್ತಕ ವಿತರಿಸುವಂತೆ ನೋಟ್ ಬುಕ್ ಯಾಕೆ ವಿತರಿಸುತ್ತಿಲ್ಲ ಅಂತನ್ನುವ ಪ್ರಶ್ನೆ ಮೂಡಿತು. ಯಾಕೆಂದರೆ ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪಾಲಕರು ಸಿರಿವಂತರೇನಲ್ಲ. ಅವರಲ್ಲಿ ಬಹುಪಾಲು ಜನ BPL ಅಡಿಯಲ್ಲಿ ಬರುವಂಥವರು. ಹೀಗಿರುವಾಗ ಯಾಕೆ ಸರ್ಕಾರ ಫ್ರೀಯಾಗಿ ನೋಟ್ ಬುಕ್ ಕೊಡಬಾರದು ಅಂತನಿಸಿದ್ದು ನಿಜ. ‘ಇಲ್ಲ, ಬ್ಯಾಗ್ ಮತ್ತು ನೋಟ್ ಬುಕ್ ಕೂಡ ನೀಡಲಾಗುತ್ತದೆ’ ಅಂತನ್ನುವ ಉತ್ತರ ಬಂತು. ಮತ್ಯಾಕೆ ನೋಟ್ ಬುಕ್ಕುಗಳ ಬಗ್ಗೆ ಚಿಂತಿಸುತ್ತೀರಿ ಅಂತ ಪ್ರಶ್ನಿಸಿದಾಗ ಅವರು ಸಂಕೋಚದಿಂದ ಹೇಳತೊಡಗಿದರು. ವಿಷಯವೇನೆಂದರೆ, ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಯ ಮಕ್ಕಳಿಗೆಂದೇ ಒಂದಿಷ್ಟು ಹಣವನ್ನು ಆಯಾ ಶಾಲೆಯ 'ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ' (SDMC) ಖಾತೆಗೆ ತುಂಬುತ್ತದೆ. ಜೊತೆಗೆ ಒಂದು ಗೈಡ್ ಲೈನ್ ನ್ನೂ! ಆ ಪ್ರಕಾರ, ಸದರಿ ಹಣವನ್ನು ಪರಿಶಿಷ್ಟ ಜಾತಿ/ಪಂಗಡದ ಮಕ್ಕಳಿಗೆ ಮಾತ್ರ ವಿನಿಯೋಗಿಸತಕ್ಕದ್ದು.

   ಅಲ್ಲ ಸ್ವಾಮೀ, ಸದ್ಯಕ್ಕೆ ಈ ಮಕ್ಕಳು ಖಾಲಿ ಜಾಗದಂತೆ. ಮೂರನೇ ಕ್ಲಾಸಿನಿಂದ ಏಳನೇ ಕ್ಲಾಸಿನವರೆಗೆ ಬರುವ ಹೊತ್ತಿಗೆ ಈ ಮಕ್ಕಳಲ್ಲಿ ನಾವು ಎಷ್ಟೆಲ್ಲ ಭಾವನೆಗಳನ್ನು ತುಂಬಬಹುದು. ಹೀಗಿರುವಾಗ, ಇಷ್ಟವಿದೆಯೋ ಇಲ್ಲವೋ, ಇಲಾಖೆಯ ಆದೇಶಕ್ಕನುಸಾರವಾಗಿ ಮಾಸ್ತರುಗಳು ತಮ್ಮ ಡ್ಯೂಟಿ ಮುಗಿಸಿಬಿಡಬಹುದು. ನಿಯಮಕ್ಕೆ ಒಳಪಡುವ ಹುಡುಗನಿಗೆ ಬ್ಯಾಗು, ನೋಟ್ ಬುಕ್ಕುಗಳನ್ನು ಖರೀದಿಸಿ ಕೊಟ್ಟುಬಿಡಬಹುದು. ಆದರೆ ಅಲ್ಲೇ ಪಕ್ಕದಲ್ಲೇ ಕುಳಿತುಕೊಳ್ಳುವ (ಈ ನಿಯಮಕ್ಕೆ ಒಳಪಡದ) ಇನ್ನೊಬ್ಬ ಹುಡುಗನಿಗೆ ಆಗ ಏನನಿಸಬಹುದು? ಮೇಸ್ಟ್ರು ತನಗೇಕೆ ನೋಟ್ ಬುಕ್ ಕೊಡುತ್ತಿಲ್ಲ ಅಂತ ಆತನಿಗೆ ಆ ವಯಸ್ಸಿನಲ್ಲಿ ಗೊತ್ತಾಗುವ ಸಂಭವಗಳು ಎಷ್ಟಿವೆ?
                  
    ಸಮಾಜದ ತುಳಿತಕ್ಕೊಳಗಾದ ಸಮೂಹಕ್ಕೆ ಒಳಿತಾಗಲೆಂದು SCPTSP ಕಾಯ್ದೆ ಅಡಿಯಲ್ಲಿ ತನ್ನ ಬಹುತೇಕ ಯೋಜನೆಗಳಲ್ಲಿ 18% ಹಣವನ್ನು ಪರಿಶಿಷ್ಟ ಜಾತಿ/ಪಂಗಡಗಳಿಗೆ ಎತ್ತಿಡಬೇಕೆಂದು ಸರ್ಕಾರ ಬಯಸುವದರಲ್ಲಿ ತಪ್ಪೇನಿಲ್ಲ. ಅದೇ ಕಾರಣಕ್ಕಾಗಿ ಇವತ್ತು ಕಲೆ, ಕ್ರೀಡೆ, ಸಾಹಿತ್ಯ, ಉದ್ಯೋಗ, ಕಾಮಗಾರಿದಂಥ ಎಲ್ಲ ರಂಗದಲ್ಲೂ ಈ ನಿಯಮ ಅಳವಡಿಕೆಯಾಗಿದೆ. ಹಾಗಂತ ಕರ್ನಾಟಕ ಸರ್ಕಾರ, ಕೇವಲ ಬಡವರಷ್ಟೇ ದಾಖಲಾಗುವ ಸರ್ಕಾರಿ ಶಾಲೆಯ ಅಮಾಯಕ ಮಕ್ಕಳಿಗೂ ಈ ತಾರತಮ್ಯ ಮಾಡುವದನ್ನು ಸಮರ್ಥಿಸಲಾದೀತೆ? 

   ಕೊನೆಯದಾಗಿ,ಇಲ್ಲಿ ಧರ್ಮಸಂಕಟಕ್ಕೆ ಬೀಳುವ ವ್ಯಕ್ತಿಯೆಂದರೆ ಶಿಕ್ಷಕ. ಯಾಕೆಂದರೆ, ಒಂದು ಮಗುವಿಗೆ ಸರ್ಕಾರದ ನೋಟ್ ಬುಕ್ ಕೊಟ್ಟು ಇನ್ನೊಂದು ಮಗುವಿನ ಪ್ರಶ್ನಾರ್ಥಕ ದೃಷ್ಟಿಯನ್ನು ಭರಿಸಬೇಕಾದವನು ಇದೇ ಶಿಕ್ಷಕ. ಹೀಗಾಗಿ, ಇಲ್ಲಿ ಸಹೃದಯದ ಶಿಕ್ಷಕರು ತಳಮಳಗೊಳ್ಳುತ್ತಾರೆ. ಇದೇ ಕಾರಣಕ್ಕೆ ಅನೇಕ ಮೇಷ್ಟ್ರುಗಳು ಸರ್ಕಾರದ ನೀತಿಗೆ ಒಳಪಡುವ ಇಬ್ಬರು ವಿದ್ಯಾರ್ಥಿಗಳಿಗೆ ಹಂಚಬಹುದಾದ ಹತ್ತು ನೋಟ್ ಬುಕ್ಕುಗಳನ್ನು, ನೀತಿಗೆ ಒಳಪಡದ ಇನ್ನೂ ಮೂವರು ವಿದ್ಯಾರ್ಥಿಗಳನ್ನು ಸೇರಿಸಿ, ತಲಾ ಎರಡೆರಡು ನೋಟ್ ಬುಕ್ಕುಗಳನ್ನು ವಿತರಿಸಿ ಎಲ್ಲರಿಗೂ ಸಮಾಧಾನ ಮಾಡುವದುಂಟು! ಆದರೆ ಇದನ್ನೆಲ್ಲ ಎಲ್ಲೂ ಹೇಳಿಕೊಳ್ಳಲಾರರು. ಹೇಳಿದರೆ, ಅದು ನಿಯಮಬಾಹಿರವಾದೀತು.  

   ಮಿಕ್ಕಂತೆ, ಇವತ್ತು ಜಾಗತಿಕ ಶಿಕ್ಷಣ ಕುರಿತಂತೆ ಪುಂಖಾನುಪುಂಖವಾಗಿ ಮಾತನಾಡಬಹುದು. ಸಿಂಗಪುರ್, ಜಪಾನ್, ಅಮೇರಿಕನ್ ಶಿಕ್ಷಣ ವ್ಯವಸ್ಥೆಯ ಬಗ್ಗೆ ರಂಗುರಂಗಿನ ಸ್ಲೈಡ್ ಗಳನ್ನು ಬಿತ್ತರಿಸಬಹುದು. ಯೂರೋಪಿನ ವ್ಯವಸ್ಥೆಯನ್ನು ಕೊಂಡಾಡುತ್ತಲೇ, ಅಲ್ಲಿನ ಸ್ವೀಡನ್ ದೇಶದ ಪ್ರೈಮರಿ ಸ್ಕೂಲುಗಳ ಬಗ್ಗೆ ಭಾಷಣವನ್ನೇ ಬಿಗಿಯಬಹುದು. ಇಡೀ ಜಗತ್ತಿನ ಶೈಕ್ಷಣಿಕ ವ್ಯವಸ್ಥೆಗೇ ಮಾದರಿಯಾಗಿರುವ ಸ್ವೀಡನ್ ತನ್ನ ಪ್ರೈಮರಿ ಶಿಕ್ಷಕರಿಗೆ 'ಪ್ರೊಫೆಸರ್'ಗಳೆಂದು ಡೆಸಿಗ್ನೇಷನ್ ಕೊಟ್ಟು ತನ್ನದೇ ಯೂನಿವರ್ಸಿಟಿ ಮೇಸ್ಟ್ರುಗಳಿಗಿಂತ ಜಾಸ್ತಿ ಸಂಬಳ ಕೊಡುತ್ತದೆ. ಮಾಗಿದ ಮಿದುಳಿಗಿಂತ ಮಾಗದ ಮಿದುಳನ್ನು ಸಂಭಾಳಿಸುವದು ಹೆಚ್ಚಿನ ಶ್ರಮದಾಯಕ ಕೆಲಸ ಅಂತನ್ನುವ ಕಾರಣಕ್ಕಾಗಿ ಶಾಲೆಗೆ ಮೇಸ್ಟ್ರುಗಳಾಗಿ ಬರುವವರ ಪೈಕಿ ಬಹುಪಾಲು ಅಭ್ಯರ್ಥಿಗಳು ಪಿಎಚ್ ಡಿ ಮಾಡಿದವರಾಗಿರಬೇಕೆಂದು ಬಯಸುತ್ತದೆ. ಕೊನೆಗೆ, ಇವೆಲ್ಲ ಮಾನದಂಡದ ಜೊತೆಗೆ ಏನೇ ಡಾಕ್ಟರೇಟ್ ಗಳಿಸಿದ್ದರೂ ನೇಮಕಾತಿಯ ಸಂದರ್ಶನದಲ್ಲಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸದರಿ ಅಭ್ಯರ್ಥಿಯಲ್ಲಿ ತಾಳ್ಮೆ ಮತ್ತು ಹಂಬಲ ಕೊರತೆಯಿದೆ ಅಂತ ಚಿಕ್ಕ ಸಂದೇಹ ಬಂದರೂ ಆತನನ್ನು ಲಿಸ್ಟಿನಿಂದ ಎತ್ತಿ ಬೀಸಾಕುತ್ತದೆ- ಅಂತೆಲ್ಲ ಹೇಳಿಕೊಂಡು ನಾವು ಸೆಮಿನಾರುಗಳಲ್ಲಿರುವವರನ್ನು ಬೆಚ್ಚಿಬೀಳಿಸಬಹುದು! 

  ಬೇರೇನಿಲ್ಲ, ಸದ್ಯಕ್ಕೆ ನನಗೆ ಅನಿಸುತ್ತಿರುವದು ಒಂದೇ: ಪ್ರೈಮರಿ ಓದುತ್ತಿರುವ ಈ ಬಡ ಹುಡುಗನಿಗೆ ತನ್ನ ವಿದ್ಯಾಭ್ಯಾಸಕ್ಕೆ ಕುರಿತಂತೆ ಸರ್ಕಾರಿ ಪಾಲಸಿಗಳ ಬಗ್ಗೆ ಯಾವ ವಿಷಾದ ಭಾವನೆಯೂ ಬರಕೂಡದು. ಪಕ್ಕದಲ್ಲಿರುವ ಇನ್ನೊಬ್ಬ ಹುಡುಗನ ಜಾತಿಯ ಬಗ್ಗೆ ವಿಕಾರ ಭಾವನೆ ಮೂಡಕೂಡದು. ಮುಂದೊಮ್ಮೆ ಪ್ರೈಮರಿ, ಹೈಸ್ಕೂಲು, ಕಾಲೇಜುಗಳನ್ನೆಲ್ಲ ಮುಗಿಸಿ ಮದುವೆಯೂ ಆಗಿ ಬದುಕಿನ ಯಾವುದೋ ಹಂತದಲ್ಲಿ ತನ್ನ ಹಳೆಯ ಸ್ಕೂಲಿಗೆ ಭೇಟಿಕೊಟ್ಟಾಗ ಈ ಹುಡುಗನಲ್ಲಿ ಕೇವಲ ಮುದವಿರಬೇಕು. ಆ ಮುದ ಹೇಗಿರಬೇಕೆಂದು ಅಂತ ಈ ಅಮೇರಿಕನ್ ಹಾಯ್ಕು ಹೇಳುತ್ತಿರುವಂತಿದೆ:

ಹಳೇ ಸ್ಕೂಲಿಗೆ ಭೇಟಿ. 
ನಲವತ್ತರ ಆಸಾಮಿ ಅವಳ
ಬೆಂಚನ್ನೇರಿ ಮುದಗೊಳ್ಳುತ್ತಿದ್ದಾನೆ.      

-          
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ

(ವಿಜಯಕರ್ನಾಟಕದಲ್ಲಿ 10.05.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)