Wednesday, December 20, 2017

ಒಂದು ರೋಲ್ಡ್ ಗೋಲ್ಡ್ ನೆಕ್ಲೇಸ್ ಕಿತ್ತುಕೊಂಡ ಜೀವನ!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 20.12.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, December 13, 2017

ಚೆಂದವಾಗಿ ನಕ್ಕಳು ರಾಜಕುಮಾರಿ, ನಾನೋ ಶಾಪಗ್ರಸ್ತ ಕಪ್ಪೆಯಾಗಿದ್ದೆ

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 06.12.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, November 22, 2017

ಪ್ರೇಮ, ವಿರಹ, ವೈರಾಗ್ಯದ ತಿರುಗಣೆ

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 22.11.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, November 8, 2017

ಚಿಟ್ಟೆಯ ರೆಕ್ಕೆ ಪಿಡಿದಾಗ ಕೈಗಂಟಿದ ಬಣ್ಣವಿದು!

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 08.11.2017 ಬುಧವಾರ
ದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, October 25, 2017

ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 25.10.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Tuesday, October 24, 2017

ಕೊಟ್ಟ ಕುದುರೆ ಏರಲಾಗದ ಕೆಟ್ಟ ಪ್ರಸಂಗವು..

ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 11.10.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)

Wednesday, September 27, 2017

ಗಾಂಧೀಯ ಸರಳತೆಯೂ ಹಾಯ್ಕುವಿನ ಭವ್ಯತೆಯೂ!

ಅಂತ್ಯದಲ್ಲಿ ಬರಹಕ್ಕೊಂದು ಮೆಸೇಜ್ ಇರಲೇಬೇಕಾ?  ನನಗಂತೂ ಯಾವತ್ತೂ ಹಾಗೆ ಅನಿಸಿಲ್ಲ. ಯಾಕೆಂದರೆ ಕನವರಿಸಿ ಹುಡುಕಿಕೊಂಡು ಹೋದ ಕಾಡಿನ ಮಧ್ಯೆ ಕಾಲುದಾರಿಗಾಗಿ ಹುಡುಕಾಟ ನಡೆಸುತ್ತಿರುವಾಗ ದಿಢೀರಂತ ಹೈವೇ ಕಂಡುಬಿಟ್ಟರೆ ಅದಕ್ಕಿಂತ ನಿರಾಸೆ ಮತ್ತೊಂದಿಲ್ಲ. ಅರೇ, ಇಷ್ಟೊತ್ತೂ ತಿರುಗಾಡಿದ್ದು, ಗಾಬರಿಯಾಗಿದ್ದು, ಪುಳಕಗೊಂಡಿದ್ದು, ಕಾಡಿನ ಘಮ, ಆ ನೀರವತೆ ಎಲ್ಲ ಸುಳ್ಳು ಅಂತನಿಸಿಬಿಡುತ್ತದೆ. ಅಲ್ಲಿಗೆ ಅದೊಂದು ವ್ಯರ್ಥ ಪಯಣ.  

   ಬರಹಗಳ ಅಂತ್ಯದಲ್ಲಿ ಪ್ರಯತ್ನಪೂರ್ವಕವಾಗಿ ಹೇರಲ್ಪಡುವ ಸಂದೇಶಗಳೂ ಹೀಗೆಯೇ. 'ರಾಮನು 
ಬಾಳೆಹಣ್ಣು ತಿಂದು ನಿದ್ದೆಹೋದನು..' ಅಂತ ಸರಳವಾಗಿ ಮುಕ್ತಾಯವಾಗುವ ಕತೆಯಲ್ಲಿ ಅಷ್ಟೇ 
ಸಹಜವಾಗಿ ಓದುಗನಿಗೆ ದೊರಕುವ unwritten ಸಂದೇಶ ಎಲ್ಲ ಪದಕಸರತ್ತಿಗಿಂತ ಮೀರಿದ್ದು. 
'ಆವತ್ತೊಂದು ದಿನ ಕುಡಿದು ಗಟಾರದಲ್ಲಿ ಬಿದ್ದಿದ್ದೆ' ಅಂತನ್ನುವ ಅನುಭವಾಮೃತ ದಯಪಾಲಿಸುವ ಲೇಖಕ, ಉದ್ದೇಶಪೂರ್ವಕವಾಗಿ ಸಂದೇಶ ಕೊಡದೇ ತನಗರಿವಿಲ್ಲದಂತೆ ಓದುಗರ ಗ್ಯಾಲರಿಗೆಂದು 
ಒಂದು ಸರಳ ಮೆಸೇಜ್ ಬಿಟ್ಟು ಹೋಗಿರುತ್ತಾನೆ. ಇವರ್ಯಾರಿಗೂ ಸಂದೇಶವಾಹಕರಾಗುವ ಹಂಗು ಇದ್ದಂತಿಲ್ಲ. ವ್ಯಾಸನಿಗೂ ಈ ವ್ಯಸನವಿದ್ದಂತಿಲ್ಲ. ಹೀಗಾಗಿ ಮೂರೂ ಮುಕ್ಕಾಲು ಪುಟಕ್ಕೊಂದು ಹಿಡನ್ ಸಂದೇಶ ರವಾನಿಸುತ್ತಲೇ ಹೋಗುವ ಮಹಾಭಾರತ, ಏನಾದರೂ ಮೆಸೇಜು ಕೊಡಲೇಬೇಕು ಅಂತ ಅವುಡುಗಚ್ಚಿ ಉಪಸಂಹಾರ ಮಾಡುವವರಿಗೆ ಒಂದು ಅತಿದೊಡ್ಡ ಬೈಬಲ್ ಅಂತ ಮಾತ್ರ ಹೇಳಬಹುದೇನೋ.         

   ಹೀಗಿರುವಾಗ, ಮೊನ್ನೆ ಸಂಜೆ ಮನೆ ಟೆರೇಸಿನ ಮೇಲೆ ಹೀಗೆಯೇ ಖಾಲಿಪೀಲಿ ಮಾತುಕತೆ ನಡೆದಿತ್ತು. 
ಷೇರುಮಾರುಕಟ್ಟೆಯ ಚಂಚಲತೆ, ಯಾವುದೋ ಹಾಡಿನ ಗಿಟಾರ್ ನೋಟೇಷನ್, ಇಸ್ಪೀಟು ಎಲೆಯಲ್ಲಿನ 
ಟ್ರಿಕ್ಕುಗಳು, ಕಾಣದ ಗುಬ್ಬಿಹಿಂಡು- ಹೀಗೆ ಎಲ್ಲಿಂದ ಎಲ್ಲಿಗೋ ಓತಪ್ರೋತವಾಗಿ ಜಿಗಿಯುತ್ತಿದ್ದ ನಮ್ಮ 
ಗುಂಪಿನ ಮಾತುಕತೆಗೆ ಒಂದು ನಿಶ್ಚಿತ ಉದ್ದೇಶ ಇದ್ದಂತಿರಲಿಲ್ಲ. ಅಷ್ಟರಲ್ಲಿ ಈಗಷ್ಟೇ ಡಿಗ್ರಿ ಮುಗಿಸಿ ಕೆಲಸ 
ಹುಡುಕುತ್ತಿರುವ ಹುಡುಗನೊಬ್ಬ ಮಾತಿನ ಮಧ್ಯೆ ಸಟ್ಟಂತ ಹೇಳಿಬಿಟ್ಟ: 
'ಏನೇ ಹೇಳ್ರಿ, ಬದುಕಿನಲ್ಲಿ ದುಡ್ಡೇ ಎಲ್ಲ ಅಲ್ಲ.'

   ನಾವೆಲ್ಲ ಮುಸಿಮುಸಿ ನಕ್ಕಿದ್ದೆವು. ಹಾಗಾದರೆ ಯಾವುದು ಮುಖ್ಯ? ಪ್ರೀತಿಯಾ? ವಿಶ್ವಾಸವಾ? ಗೆಳೆತನವಾ? ಆರೋಗ್ಯವಾ? ವಿದ್ಯೆ? ಧಾಡಸೀತನ? ಚಾಲಾಕಿತನ? ಸೌಂದರ್ಯ? ಒಳ್ಳೆಯತನ? ಅರಿವು? ಯಾರಿಗೆ ಯಾವುದು ಮುಖ್ಯವೋ ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವವರ ಪೈಕಿ ಯಾರಾದರೂ 'ದುಡ್ಡೇ ಮುಖ್ಯ ಅಲ್ಲ' ಅಂದುಬಿಟ್ಟರೆ ನನಗ್ಯಾಕೋ ಅದು ನಗು ತರಿಸುತ್ತದೆ. ಯಾಕೆಂದರೆ ನನ್ನ ನಂಬಿಕೆಯಂತೆ, ಹಾಗೆ ಹೇಳಲು ಅರ್ಹತೆ ಇರುವದು ಕೇವಲ ಮೂರು ಜನರಿಗೆ ಮಾತ್ರ: ಒಂದೋ, ಆತ ಸಂತನಾಗಿರಬೇಕು. ಇಲ್ಲವಾದಲ್ಲಿ ಆತ ಈಗಾಗಲೇ ಸಿಕ್ಕಾಪಟ್ಟೆ ದುಡ್ಡು ಗಳಿಸಿರಬೇಕು. ಇವೆರೆಡೂ ಅಲ್ಲವಾದಲ್ಲಿ ಆತ ಮಾನಸಿಕವಾಗಿ ಅಸ್ವಸ್ಥನಾಗಿರಬೇಕು!
                                  
   ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪುಸ್ತಕ ಮೇಳಕ್ಕೆ ಹೋಗಿದ್ದೆ. ನನ್ನ ಟೆಕ್ಕಿ ಗೆಳೆಯರು ಅವರವರ ಇಷ್ಟಾನುಸಾರ ಪುಸ್ತಕ, ಸೀಡಿ, ಡಿವಿಡಿ ಖರೀದಿಯಲ್ಲಿ ತೊಡಗಿದ್ದರು. ಕೆಲವೊಂದು ಇಂಗ್ಲಿಷ್ ಪುಸ್ತಕಗಳ ಬೆಲೆಯಂತೂ ಗಾಬರಿಯಾಗುವ ರೀತಿಯಲ್ಲಿದ್ದವು. ಅಷ್ಟರಲ್ಲಿ ಗೆಳೆಯನೊಬ್ಬ ಒಂದು ಪುಸ್ತಕದ ಗಾತ್ರ ಮತ್ತು ಬೆಲೆಯನ್ನು ವಿಚಿತ್ರ ರೀತಿಯಲ್ಲಿ ನೋಡತೊಡಗಿದ್ದ. ಸದರಿ ಪುಸ್ತಕದ ಪುಟಗಳನ್ನು ಅವಸರದಿಂದ ತಿರುಗಿಸುತ್ತ 'ಇಷ್ಟೇನಾ? ಬರೀ ಇಷ್ಟೇನಾ?' ಅಂತ ಪದೇಪದೇ ಗೊಂದಲಕ್ಕೆ ಈಡಾಗುತ್ತಿದ್ದ. ಇನ್ನೂರಕ್ಕೂ ಹೆಚ್ಚಿನ ಪುಟಗಳಿದ್ದ ಸದರಿ ಪುಸ್ತಕದ ಹೆಸರು: 'ಸತ್ಯದೊಂದಿಗೆ ನನ್ನ ಪ್ರಯೋಗಗಳು' ಬೆಲೆ: ಇಪ್ಪತ್ತು ರೂಪಾಯಿಗಳು. ಹಾಗೆ ನೋಡಿದರೆ, ಸುಮಾರು ವರ್ಷಗಳ ಹಿಂದೆ ಕೇವಲ ಬೆಲೆ ಕಡಿಮೆ ಅಂತನ್ನುವ ಕಾರಣಕ್ಕೇ ನಾನು ಕೂಡ 'ಗಾಂಧೀ ಆತ್ಮಕತೆ' ಖರೀದಿಸಿದ್ದುಂಟು. ಆವತ್ತು ಈ ಪುಸ್ತಕದ ಬೆಲೆ ಕುರಿತಂತೆ ಗೆಳೆಯನ ಉದ್ಗಾರ ನೋಡಿದಾಗ ಸರಳತೆ ಎಂಬ phenomenon ಹೇಗೆ ನಮಗೆಲ್ಲ ಅಗ್ಗದ ವಸ್ತುವಿನಂತೆ ಭಾಸವಾಗುತ್ತಿದೆಯಲ್ಲ ಅಂತೆನಿಸಿ ನಾಚಿಕೆಯಾಯಿತು. 

   ಕವಿತೆಯೂ ಥೇಟ್ ಹೀಗೆಯೇ. ಅದರಲ್ಲೂ ಹಾಯ್ಕು ಪ್ರಾಕಾರದ ಕವಿತೆಗಳು. ಸರಳತೆ ಮತ್ತು ಭವ್ಯತೆ 
ಹಾಯ್ಕುವಿನ ಎರಡು ಮಜಲುಗಳು. ಬಹುತೇಕ ಹಾಯ್ಕುಗಳು ಸರಳಾತಿ ಸರಳ ಪದಗಳಲ್ಲಿ 
ಹುಟ್ಟಿಕೊಂಡಂಥವು. ಹೀಗೆ ಸರಳವಾಗಿ ಓದಿಸಿಕೊಂಡು ಹೋಗಬಲ್ಲ ಹಾಯ್ಕುವೊಂದು ತನ್ನ ಕೊನೆಯ 
ಪದವನ್ನು ಓದಿಸಿಕೊಳ್ಳುತ್ತಿದ್ದಂತೆಯೇ ಓದುಗನಲ್ಲಿ ಒಂದು ಭವ್ಯ ಹೊಳಹನ್ನು ಹುಟ್ಟುಹಾಕಿರುತ್ತದೆ. 
ನನಗೆ ಬಂದಂಥ ಪ್ರತಿಕ್ರಿಯೆಗಳನ್ನು ನಂಬುವದಾದರೆ, ನನ್ನಬಹುತೇಕ ಲೇಖನಗಳಲ್ಲಿ ಓದುಗರಿಗೆ ಅತಿ 
ಹೆಚ್ಚು ಪ್ರಿಯವಾಗಿರುವಂಥದ್ದು ಈ ಹಾಯ್ಕುಗಳೇ. 

   ಇಂಥದೊಂದು ಕಾವ್ಯಜಗತ್ತಿಗೆ ಹೊಸದಾಗಿ ಕಾಲಿಟ್ಟ ಬಹುತೇಕರು ಕೇಳುವ ಮೊದಲ ಪ್ರಶ್ನೆಯೆಂದರೆ, 
ಹಾಯ್ಕು ಹೇಗೆ ಬರೆಯುವದು? ಈ ಆಟದ ನಿಯಮಗಳೇನು? ಈಗಾಗಲೇ ಇದೇ ಅಂಕಣದಲ್ಲಿ ಅನೇಕ ಸಲ 
ಹಾಯ್ಕುಗಳ ವಿವಿಧ ನಿಯಮಾವಳಿಗಳ ಬಗ್ಗೆ ಹೇಳಿರುವದರಿಂದ ಮತ್ತೇ ಅವುಗಳ ಬಗ್ಗೆ ಹೇಳದೇ 
ಹೊಸದಾದ ಮತ್ತು ಸರಳವಾಗಿ ಅಳವಡಿಸಕೊಳ್ಳಬಹುದಾದ ನಿಯಮಗಳ ಬಗ್ಗೆ ಯೋಚಿಸುತ್ತಿದ್ದಾಗ 
ಡೇವಿಡ್ ಎಂಬ ಹಾಯ್ಕು ಕವಿಯ ಒಂದಿಷ್ಟು ಮಾತುಗಳು ಆಸಕ್ತಿಕರ ಅಂತನಿಸಿದವು. 

   ಆತನ ಪ್ರಕಾರ, ಮೊಟ್ಟಮೊದಲನೆಯದಾಗಿ ಹಾಯ್ಕು ಕವಿತೆ ಅತ್ಯಂತ ಚಿಕ್ಕದಾಗಿರಬೇಕು. ಅಂದರೆ, 
ಒಂದು ಉಚ್ವಾಸ ಮತ್ತು ನಿಶ್ವಾಸಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದೋ, ಇಷ್ಟೇ ಅವಧಿಯಲ್ಲಿ 
ಓದಿ ಮುಗಿಸುವಷ್ಟು ಹಾಯ್ಕು ಚಿಕ್ಕದಿರಬೇಕು. ಎರಡನೆಯದಾಗಿ, ಭೂತವಲ್ಲದ ಭವಿಷ್ಯವಲ್ಲದ ಈ 
ನಮ್ಮ ಹಾಯ್ಕು ಯಾವಾಗಲೂ ವರ್ತಮಾನದಲ್ಲಿ ನಡೆಯುತ್ತಿರುವಂತೆ ಬಿಂಬಿತಗೊಂಡು ಒಂದು 
ನಿಶ್ಚಿತ ಘಟನೆಯ ಚಿತ್ರವನ್ನು ಕಟ್ಟಿಕೊಡುತ್ತಿರಬೇಕು. ಕೊನೆಯದಾಗಿ, ಈ ಚಿತ್ರ ಯಾವುದೋ ಅತ್ಯಂತ 
ಸಾಮಾನ್ಯ ಘಟನೆಯನ್ನು ಬಿಂಬಿಸುತ್ತಿದ್ದರೂ ಅದು ಒಂದು ಒಳನೋಟವನ್ನು ಬೆರಗಿನಿಂದ 
ಬಿಂಬಿಸುತ್ತಿರಬೇಕು ಮತ್ತು ಆ ಬೆರಗು ಗೌರವದಿಂದ ಕೂಡಿರಬೇಕು.

ಇಲ್ಲಿ ಒಂದಿಷ್ಟು ಅಂಥ ಚಿತ್ರಣಗಳಿವೆ. ಸಾಮಾನ್ಯವಾಗಿ ಹಾಯ್ಕುಗಳನ್ನು ವಿವರಿಸಲು ಹೋಗಬಾರದು. ಅದು ಹಾಯ್ಕು ಪರಂಪರೆಯಲ್ಲಿ ನಿಷಿದ್ಧ. ಆದರೆ ನಮ್ಮದಲ್ಲದ ಒಂದು ಹೊಸತನ್ನು ನಮ್ಮದಾಗಿಸಿಕೊಳ್ಳುವಾಗ ಒಂದಿಷ್ಟು ಸಣ್ಣ ಅಪರಾಧಗಳನ್ನು ಮಾಡಿದರೆ ತಪ್ಪಿಲ್ಲವಂತೆ!

   ಈ ಚಿತ್ರಣ ಗಮನಿಸಿ. ಇಲ್ಲಿಬ್ಬರು ಹೊಲದ ಕೆಲಸಕ್ಕೆಂದು ಹೊರಟಿರುವರು. ಮಧ್ಯವಯಸ್ಕ ತಾಯಿ 
ಮತ್ತು ಆಕೆಯ ಜವ್ವನ ಮಗಳು. ಗುಳೇ ಎದ್ದು ಈ ಊರಿಗೆ ಹೊಸದಾಗಿ ಬಂದಿರುವ ಈ ಜೋಡಿಗೆ 
ಇದು ಪರಿಚಿತ ದಾರಿಯಲ್ಲ. ಹೀಗಿರುವಾಗ, ಆಕಸ್ಮಿಕವಾಗಿ ಗುಲಾಬಿ ತೋಟವೊಂದು ಎದುರಿಗೆ 
ಸಿಕ್ಕುಬಿಡುತ್ತದೆ. ಸ್ವಂತ ಊರು ತೊರೆದು ಕಾಣದ ಭಾಗ್ಯವನ್ನರಿಸಿ ಹೊರಟಿರುವ ಈ ಜೋಡಿ ತಮ್ಮ 
ಅಂಥದೊಂದು ಅನಿಶ್ಚಿತ ಘಳಿಗೆಯಲ್ಲೂ ಹಾಯ್ಕು ಹುಟ್ಟಿಗೆ ಕಾರಣರಾಗುತ್ತಾರೆ. ಗುಲಾಬಿ ತೋಟ 
ಕಾಣುತ್ತಲೇ ಮಗಳ ಕೆದರಿದ ಕೂದಲನ್ನು ಒಟ್ಟುಗೂಡಿಸಿ ಲಗುಬಗೆಯಲ್ಲಿ ಜಡೆ ಹೆಣೆಯುತ್ತಿರುವ 
ತಾಯಿಯ ಚಿತ್ರವನ್ನು ಕವಿ ಕಟ್ಟಿಕೊಡುತ್ತಾನೆ.   

   ಮುಂದೊಮ್ಮೆ ಈ ಜೋಡಿ ಹೊಲ ತಲುಪುತ್ತದೆ. ಇಳಿಸಂಜೆಯವರೆಗೂ ಕೆಲಸ ಮಾಡುತ್ತ ಹೈರಾಣಾಗಿರುವ ಅಮ್ಮ ಒಂದೆಡೆ ಕೂತು ಸುಧಾರಿಸಿಕೊಳ್ಳುತ್ತಿದ್ದರೆ, ಜಾಲರಿ ಬಲೆಯಂಥ ರವಿಕೆ ತೊಟ್ಟಿರುವ ಮಗಳು ಉತ್ಸಾಹದಲ್ಲೇ ಮುಂದುವರೆಯುತ್ತಿದ್ದಾಳೆ. ಇಳಿಸಂಜೆಯ ಹೊತ್ತಿನಲ್ಲಿ ಅವಧಿಗೂ ಮುನ್ನವೇ ಮೂಡಿರುವ ಪೂರ್ಣಚಂದಿರ. ಅವನಿಗೂ ಈ ಜಾಲರಿ ರವಿಕೆಯ ಜವ್ವನೆ ಬಗ್ಗೆ ಕುತೂಹಲ. ಬೆವರಿನಿಂದ ಜ್ವಲಿಸುತ್ತಿರುವ ಈ ಶ್ವೇತವರ್ಣೆಯನ್ನು ತಂಪಾಗಿಸಲು ಸ್ವತಃ ತಾನೇ ಕೆಳಗಿಳಿಯುತ್ತಿದ್ದಾನೆ. ಸಾಂತ್ವನಗೈದ ಪೂರ್ಣಚಂದಿರ ಬಲೆಯಿಂದ ಹೊರಬರಲಾಗದೇ ಕೊನೆಗೊಮ್ಮೆ ಜಾಲರಿಯಲ್ಲೇ ಸ್ಥಾಪಿತನಾಗಿ ಹೋದನೆಂಬ ಕತೆ ನಂಬಲು ಬಲು ಮಜವಾಗಿದೆ! 

   ಸಮಾಧಾನದ ಸಂಗತಿ ಏನೆಂದರೆ, ಜಗತ್ತಿನ ಯಾವ ಹಾಯ್ಕು ಕೂಡ ಅಂತ್ಯದಲ್ಲಿ ನಮ್ಮನ್ನು ನಿರಾಸೆಗೊಳಿಸುವದಿಲ್ಲ. ಇವಳನ್ನು ನೋಡಿ: ಇವಳೊಬ್ಬಳು ವಿವಾಹಿತ ಕನ್ಯೆ! ಕನ್ಯೆ ಹೇಗೆಂದರೆ, ಮದುವೆಯಾದ ದಿನವೇ ಆಕೆಯ ಧೀರನಿಗೆ ಸೇನೆಯಿಂದ ಕರೆಬಂದು ಯುದ್ಧಕ್ಕೆ ತೆರಳಿದ್ದಾನೆ. ಇಲ್ಲೀಗ ಚಳಿಗಾಲ. ದೂರದಲ್ಲೆಲ್ಲೋ ಧೀರ ತನ್ನ ಶತ್ರುಗಳೊಂದಿಗೆ ಯುದ್ಧ ತಲ್ಲೀನನಾಗಿದ್ದರೆ ಈಕೆ ಇಲ್ಲಿ ನಡುಗುವ ಋತುಮಾನದೊಂದಿಗೆ ಕಾದಾಡುತ್ತಿದ್ದಾಳೆ. ಬೇಸಿಗೆ ಕಳೆದ ಮೇಲೆ ಬಂದೇ ಬರುವೆನೆಂದು ಹೇಳಿಹೋಗಿರುವ ಗಂಡ. ಇಲ್ಲಿಯವರೆಗೂ ಆತನಿಂದ ಒಂದು ಸುದ್ದಿಯಿಲ್ಲ. ಒಂದು ಪತ್ರವಿಲ್ಲ. ವಿರಹದಲ್ಲಿರುವ ಚೆಲುವೆಗೋ ಕಾಲಮಾನದ ಅರಿವೇ ಇದ್ದಂತಿಲ್ಲ. ಪ್ರತಿದಿನ ತನ್ನ ಮನೆಯ ಗೇಟಿಗೆ ಅಳವಡಿಸಲಾದ ಅಂಚೆಡಬ್ಬದಲ್ಲಿ ಪತ್ರಕ್ಕಾಗಿ ತಡಕಾಡುವದು. ಅನ್ಯಮನಸ್ಕಳಾಗಿ ಹಿಂತಿರುಗುವದು. ಇಂತಿಪ್ಪ ಸನ್ನಿವೇಶದಲ್ಲಿ ರೊಮೇನಿಯಾದ ದಾನಾ ಮಾರಿಯಾ ಎಂಬ ಕವಿಯತ್ರಿ ಹೇಗೆ ಅಲ್ಲಿನ ಋತುಮಾನದ ಜೊತೆಗೆ ಅಲ್ಲಿನ ಇಡೀ ಸನ್ನಿವೇಶವನ್ನೂ ಚಕ್ಕಂತ ಬದಲಾಯಿಸುತ್ತಾಳೆ ನೋಡಿರಿ. ಎಂದಿನಂತೆ ಅಂಚೆ ಹುಡುಕಲು ಹೋದ ಕನ್ಯೆಗೆ ಅಲ್ಲೇನು ಕಾಣಿಸುತ್ತಲಿದೆ ನೋಡಿರಿ: 

ಇದ್ಯಾವುದರ ಸೂಚನೆ
ಬಿಸಿಲ ನಿರ್ಗಮನದ್ದೋ?
ಶರತ್ಕಾಲ ಆಗಮನದ್ದೋ?
ಬೇಲಿ ಬಾಗಿಲಕ್ಕೆ ತೂಗುಹಾಕಿದ
ಅಂಚೆಡಬ್ಬದಲ್ಲಿ ಎಲೆಯೊಂದು ಪತ್ರವಾಗಿದೆ.
                                                                                        -             
 
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 27.09.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

Wednesday, September 13, 2017

ಅದ್ಯಾವ ಪಂಥದವನೇ ಆಗಿರಲಿ, ಅವನನ್ನು ಮೊದಲು ನೇಣಿಗೇರಿಸಲಿ

ರೈಲಿನಲ್ಲಿ ಕುಳಿತಿರುವ ಮದುಮಗಳಿಗೆ ಅಂಗೈ 
ಮೆಹಂದಿ ಯಾಕೆ ಕೆಂಪೇರಿಲ್ಲ ಅನ್ನುವ ಚಿಂತೆ.
ವಿಮಾನದಲ್ಲಿ ಹುರಿದ ಮೀನು ತಿನ್ನುತ್ತಿರುವ ಮದುಮಗನಿಗೆ
ಎಂದೋ ನೋಡಿದ್ದ ಯಾರದೋ ಮೀನಖಂಡದ ಚಿಂತೆ. 
ವರವೋ ಶಾಪವೋ ಶಪಥವೋ ಅಂತೂ ಇಂತೂ 
ಎಲ್ಲರಲ್ಲೂ ವ್ಯಥೆಯೊಂದು ಓಡುತ್ತಲೇ ಇರುತ್ತದಂತೆ;
ತೊಟ್ಟಬಾಣವ ಮರಳಿ ತೊಡಬಾರದಂತೆ!

   ಸುಮಾರು ವರ್ಷಗಳ ಹಿಂದೆ ತಮಾಷೆಗೆಂದು ಬರೆದಿದ್ದ ಕವಿತೆಯಿದು. ಅಸಲಿಗೆ ಇಲ್ಲಿ ಒಬ್ಬೊಬ್ಬರದು ಒಂದೊಂದು ಚಿಂತೆ. ನನಗೋ ಆಫೀಸಿಗೆ ತಡವಾಗುತ್ತಿದೆ ಅಂತನ್ನುವ ಚಿಂತೆ. ಹಾಗಂದುಕೊಂಡೇ ಮೊನ್ನೆ ಹೋಟೇಲಿನಲ್ಲಿ ತಿಂಡಿ ಮುಗಿಸಿ ಇನ್ನೇನು ಗಾಡಿ ತೆಗೆಯೋಣ ಅಂತ ಹೊರಗೆ ಬಂದೆ. ನೋಡಿದರೆ ರಸ್ತೆಯಲ್ಲಿ ಏಳೆಂಟು ಜನರ ಒಂದು ಗುಂಪು. ಬೆಂಗಳೂರಿನ ಮುಖ್ಯರಸ್ತೆಯ ತಿರುವಿನಲ್ಲೊಂದು ಎಂಥದೋ ಜಗಳ. ಒಂದು ಆಟೋ, ಒಂದು ಕಾರು ಇಡೀ ರಸ್ತೆಗೆ ಅಡ್ಡಹಾಕಿಕೊಂಡು ನಿಂತುಬಿಟ್ಟಿದ್ದಾರೆ. ನೋಡನೋಡುತ್ತಲೇ ಎರಡು ನಿಮಿಷದಲ್ಲೇ ಟ್ರಾಫಿಕ್ ಜಾಮ್. 'ಪೊಂಪೊಂ' ಅಂತನ್ನುವ ಹಾರ್ನುಗಳ ಜುಗಲ್ ಬಂದಿ. ಚಾಲಕರಿಬ್ಬರೂ ತಮ್ಮ ಗಾಡಿ ತೆಗೆಯಲೊಲ್ಲರು. ಹಾರ್ನು ಬಜಾಯಿಸುತ್ತಿರುವ ಯಾರೊಬ್ಬರೂ ತಮ್ಮ ವಾಹನದಿಂದ ಇಳಿದು ಜಗಳ ಬಿಡಿಸಲೊಲ್ಲರು.

   ನಾನೂ ಅದೇ ಮಾರ್ಗವಾಗಿ ಹೋಗಬೇಕಿತ್ತು. ಏನಾಗಿದೆ ನೋಡೋಣ ಅಂತ ಗುಂಪಿನ ಕಡೆಗೆ ಹೋದೆ. ಚಾಲಕರಿಬ್ಬರ ಜಗಳ ನಿರಾತಂಕವಾಗಿ ಸಾಗುತ್ತಲೇ ಇತ್ತು. ಅವರಿಗೋ ಹಿಂದೆ ಸಾಲುಗಟ್ಟಿ ನಿಂತಿರುವ ವಾಹನಗಳ ಪರಿವೆಯೇ ಇಲ್ಲ. ರಸ್ತೆಗೆ ಅಡ್ಡಲಾಗಿ ನಿಂತಿದ್ದ ಕಾರು, ಆಟೋ ಎರಡನ್ನೂ ಗಮನಿಸಿದೆ. ಯಾವ ಅಪಘಾತದ ಕುರುಹೂ ಕಾಣಲಿಲ್ಲ. ಇವರಿಬ್ಬರನ್ನೂ ಗಮನಿಸಿದೆ. ಇಬ್ಬರಿಗೂ ಏನೂ ಗಾಯದ ಲಕ್ಷಣ ಗೋಚರಿಸಲಿಲ್ಲ. ವಿಷಯದ ತಳಬುಡ ಏನೆಂದು ಗೊತ್ತಾಗದೇ ಅವರಿಬ್ಬರ ಮಧ್ಯೆ ಹೋಗಿ ನಿಧಾನವಾಗಿ ಕೇಳಿದೆ:

"ಸಾರ್, ಸಾರ್.. ಏನಾಯ್ತು ಸಾರ್?" 
'ಏನೂ ಆಗಿಲ್ಲ..'
"ಗಾಡಿಗೆ ಏನಾದ್ರೂ ಆಯಿತೇ?"
'ಏನೂ ಆಗಿಲ್ಲ..'
"ನಿಮಗೇನಾದರೂ ಆಯಿತೇ?"
'ಏನೂ ಆಗಿಲ್ಲ..'
"ಮತ್ಯಾಕೆ ಜಗಳ ಸಾರ್?"
'ಏನೂ ಆಗಿಲ್ಲ ಕಣ್ರೀ, ಏನಾದ್ರೂ ಆಗಿದ್ದರೆ..?'                   

   ಇದು ಈ ಲೋಕದ ರೀತಿ. ಬಹುಶಃ ಇವತ್ತೇನೋ ಇವರಿಬ್ಬರೂ ಆರಾಮಾಗಿದ್ದಾರೆ. ಹೀಗಾಗಿ ಇವರಿಬ್ಬರ ಓತಪ್ರೋತಕ್ಕೆ ಹಿಂದೆ ನಿಂತಿರುವ ಜನಪ್ರವಾಹದ ಹಂಗಿಲ್ಲ. ಕೊನೆಗೆ ಏನು ಮಾಡುವದೆಂದು ಗೊತ್ತಾಗದೇ ತಲೆಕೆಟ್ಟು ನನ್ನ ಮೊಬೈಲ್ ತೆಗೆದೆ. ಅವರಿಬ್ಬರಿಗೂ ಕಾಣುವಂತೆ ಅವರ ವಾಹನದ ನಂಬರ್ ಪ್ಲೇಟ್ ಫೋಟೋ ತೆಗೆದೆ. ಅನಂತರ ಅವರಿಬ್ಬರಿಗೂ ಕೊಂಚ ನಿಧಾನವಾಗಿ ಸ್ಪಷ್ಟವಾಗಿ ಹೇಳಿದೆ:
"ನೋಡಿ, ಎರಡೂ ಗಾಡಿ ಸೈಡಿಗೆ ಹಾಕಿ ಮಾತಾಡ್ಕೊಳ್ಳಿ. ಇಲ್ಲವಾದಲ್ಲಿ ಟ್ರಾಫಿಕ್ಕಿಗೆ ತೊಂದರೆ ಮಾಡ್ತಾ ಇದೀರಂತ ಕಂಟ್ರೋಲ್ ರೂಮಿಗೆ ನಾನೇ ಕಂಪ್ಲೇಂಟ್ ಮಾಡ್ತೀನಿ.."

   ಅಷ್ಟೇ! ದಿಢೀರೆಂದು ಮೂಡು ಬದಲಾಗಿತ್ತು. ಇಬ್ಬರೂ ವಾಹನ ಚಾಲಕರು ಕೊಂಚ ಗಲಿಬಿಲಿಯಾದರು. ನಮ್ಮಷ್ಟಕ್ಕೆ ನಾವು ಜಗಳ ಮಾಡಿಕೊಂಡು ಆರಾಮಾಗಿದ್ದರೆ ಇವನದೇನಯ್ಯ ಕಿತಾಪತಿ? ಅಂತ ನನ್ನನ್ನು ಅಸಹನೆಯಿಂದ 
ನೋಡಿದರು. ಕೊನೆಗೆ ಅಸ್ಪಷ್ಟವಾಗಿ ಏನೋ ಬೈದುಕೊಂಡು ಗಾಡಿ ತೆಗೆದರು. ಟ್ರಾಫಿಕ್ ಚಲಿಸತೊಡಗಿತು. ಬದುಕಿನಲ್ಲಿ ಇವರಿಬ್ಬರನ್ನು ಮತ್ತೊಮ್ಮೆ ನಾನು ಭೇಟಿ ಆಗುತ್ತೇನೆಯೋ ಇಲ್ಲವೋ ಅಂತನ್ನುವ ಗ್ಯಾರಂಟಿಯಿಲ್ಲವಾದ್ದರಿಂದ ಅವರ ಅಸಹನೆಯ ನೋಟವನ್ನೂ, ಅಸ್ಪಷ್ಟ ಗೊಣಕುವಿಕೆಯನ್ನೂ ಅಲ್ಲೇ ರಸ್ತೆ ಬದಿಯಲ್ಲಿ ಝಾಡಿಸಿಕೊಂಡು ಏನೋ ಘನಂದಾರಿ ಮಾಡಿದವನಂತೆ ನನ್ನ ಗಾಡಿಯತ್ತ ನಡೆದೆ. 

   ಗಾಡಿ ಓಡಿಸುತ್ತಲೇ ನನ್ನ ಮನದಲ್ಲಿ ಮೂಡುತ್ತಿದ್ದುದು ಒಂದೇ ಪ್ರಶ್ನೆ: ರಸ್ತೆಯಲ್ಲಿನ ಇಂಥ ಅನಪೇಕ್ಷಿತ ಜಗಳಕ್ಕಿಂತ ಸಾಮಾಜಿಕ ತಾಣಗಳಲ್ಲಿನ ಜಗಳಗಳು ಹೇಗೆ ಭಿನ್ನ? ಆ ಕ್ಷಣದಲ್ಲಿ ನನಗೇನೂ ಅಷ್ಟೊಂದು ಫರಕು ಕಾಣಲಿಲ್ಲ. ಮೊನ್ನೆ ಅನಾಮಧೇಯರ ಗುಂಡಿಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದರು. ಸದರಿ ಘಟನೆಯ ಬಗ್ಗೆ ಫೇಸ್ ಬುಕ್ಕಿನಲ್ಲಿ ಎಷ್ಟು ತೆರನಾದ ವಾಗ್ವಾದಗಳು ನಡೆಯಬಹುದೋ ಅಷ್ಟೂ ರೀತಿಯ ಪರ್ಮುಟೇಶನ್ ಮತ್ತು ಕಾಂಬಿನೇಷನ್ ಹೊರಬಂದವು. 

   ಸದರಿ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ನಾನಾರೀತಿಯ ಹೇಳಿಕೆಗಳು ಫೇಸ್ ಬುಕ್ಕಿನಲ್ಲಿ ಜೀವಪಡೆದುಕೊಳ್ಳತೊಡಗಿದವು. ಇದು ಬಲಪಂಥೀಯರ ಕೆಲಸವೆಂದು ಎಡಪಂಥೀಯರು ಹೇಳಿಕೆ ಕೊಟ್ಟರು. ಮರುಕ್ಷಣವೇ ಬಲಪಂಥೀಯರ ಬಾಣ ನಕ್ಸಲ್ ವಾದದತ್ತ ತಿರುಗಿತು. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ರಾಜಕಾರಣದ ಜರೂರತ್ತು ಇರುವದರಿಂದ ಹೀಗೆ ಒಬ್ಬರ ಮೇಲೊಬ್ಬರು ಬೆರಳು ತೋರಿಸುವದು ಸಹಜ. ಆದರೆ ಈ ಜರೂರತ್ತಿನ ಹಂಗು ನಮ್ಮಂಥ ಜನಸಾಮಾನ್ಯರಿಗೆ ಇರಬೇಕಿಲ್ಲ. ನಮ್ಮೊಳಗಿನ ಮನುಷ್ಯತ್ವ ಜಾಗೃತವಾಗಲು ಗೌರಿ ಲಂಕೇಶ್ ಒಬ್ಬ ಪತ್ರಕರ್ತೆಯಾಗಿದ್ದರು ಅಂತನ್ನುವ ವಿಶೇಷಣ ಕೂಡ ನಮಗೆ ಬೇಕಿರಲಿಲ್ಲ. ಅದರ ಬದಲಿಗೆ, ಹತ್ಯೆ ಆಗಿರುವದು ಒಬ್ಬ ಮನುಷ್ಯ ಅನ್ನುವದಷ್ಟೇ ಸಾಕಿತ್ತು. 

   ಆದರೆ ಹತ್ಯೆ ಕುರಿತಂತೆ ತಮ್ಮದೇ ರೀತಿಯಲ್ಲಿ ತಹತಹಿಸುತ್ತಿದ್ದ ದೊಡ್ಡದೊಂದು ಗುಂಪಿಗೆ ಇದ್ಯಾವುದೂ ಬೇಕಿರಲಿಲ್ಲ. ಈ ಗುಂಪಿನಲ್ಲಿ ನಳನಳಿಸುತ್ತಿದ್ದಿದ್ದು ಸಿದ್ಧಾಂತವಷ್ಟೇ. ಈ ಗುಂಪಿನಲ್ಲಿ ಎಡದವರೂ ಇದ್ದರು. ಬಲದವರೂ ಇದ್ದರು. ಒಂದು ಭಿನ್ನವಿಚಾರವನ್ನು ಹತ್ತಿಕ್ಕುವದಕ್ಕಾಗಿ ಕೊಲೆಯನ್ನೇ ಮಾಡಬಹುದೇ? ಅಂತ ಪ್ರಶ್ನಿಸುತ್ತಿದ್ದವರೇ ಕೊಲೆಗೆ ಸಂಬಂಧಿಸಿದಂತೆ ಯಾರಾದರೂ ಭಿನ್ನ ಆಲೋಚನೆಯನ್ನು ವ್ಯಕ್ತಪಡಿಸಿದರೆ, ತಕ್ಷಣ ಅಂಥವರ ಮೇಲೆ ಮುಗಿದು ಬೀಳುತ್ತಿದ್ದರು. ಆ ಮೂಲಕ ತಾವು ಅಲ್ಲಿಯವರೆಗೂ ಯಾವುದನ್ನು ಪ್ರಚುರಪಡಿಸುತ್ತಿದ್ದರೋ, ಅಂಥ ಭಿನ್ನ ಅಭಿಪ್ರಾಯಗಳಿಗೆ ಮನ್ನಣೆ ಕೊಡುವದನ್ನೇ ಮರೆಯುತ್ತಿದ್ದರು. ಈ ಗುಂಪಿಗೆ ಸ್ಪರ್ಧೆಗೆ ಬಿದ್ದವರಂತೆ ಇನ್ನೊಂದು ಗುಂಪು ಇನ್ನೊಂದು ರೀತಿಯಲ್ಲಿ ಅಧಃಪತನದತ್ತ ಹೊರಟಿತ್ತು. ಮನುಷ್ಯನ ಸಾವನ್ನೂ ಕೂಡ ಗೇಲಿ ಮಾಡಿಕೊಂಡು ಸಂಭ್ರಮಿಸುತ್ತ ಮನುಷ್ಯರ ಪಟ್ಟಿಯಿಂದ ತನ್ನ ಹೆಸರನ್ನು ಅಳಿಸಿಕೊಳ್ಳುವತ್ತ ದಾಪುಗಾಲಿಡುತ್ತಿತ್ತು. 

   ಒಂದು ಸಹಜ ಮತ್ತು ಅಕಾಲಿಕ ಸಾವಿಗೆ ಎಷ್ಟೊಂದು ಮುಖಗಳು? ಒಂದು ಸಾವಿನ ಹಿನ್ನೆಲೆಯಲ್ಲಿ ಬೆಳಕನ್ನು ಅರಸಿಕೊಂಡು ಹೋದವರೆಷ್ಟು? ಒಂದು ಹತ್ಯೆಯ ಮುಸುಕಿನಲ್ಲಿ ಕಳ್ಳನಗೆ ಬೀರಿದವರೆಷ್ಟು? ಇವರಿಬ್ಬರ ಮಧ್ಯೆ ಏನನ್ನೂ ಹೇಳಲಾಗದೇ, 'ಅದ್ಯಾವ ಪಂಥದವನೇ ಆಗಿರಲಿ, ಆದಷ್ಟು ಬೇಗ ಆತ ನೇಣಿಗೇರುವಂತಾಗಲಿ' ಅಂತ ಮನದಲ್ಲೇ ಮರುಗಿದವರೆಷ್ಟೋ?

   ಹಾಗೆ ನೋಡಿದರೆ, ಮನುಷ್ಯತ್ವ ಮತ್ತು ಕಾಮನ್ ಸೆನ್ಸ್ ಇರುವ ಮನುಷ್ಯ ಒಂದು ಸಾವಿಗೆ ಸಂಬಂಧಪಟ್ಟಂತೆ ಮೌನಕ್ಕೆ ಮೊರೆ ಹೋಗಬೇಕು. ಇನ್ನು ಆ ಸಾವು ಅಸಹಜ ಮತ್ತು ದಾರುಣವಾಗಿದ್ದಲ್ಲಿ ಸುತ್ತಲಿನ ಸಮಾಜ ಅಂಥದೊಂದು ಘಟನೆಯೆಡೆಗೆ ತನ್ನ ಸಾತ್ವಿಕ ಸಿಟ್ಟು ಪ್ರದರ್ಶಿಸಬೇಕು. ಆ ಸಿಟ್ಟು ಸಮಾಜಘಾತಕ ಶಕ್ತಿಗಳಿಗೆ ಪ್ರತಿರೋಧ ಮತ್ತು ಎಚ್ಚರಿಕೆ ನೀಡುವಂತಿರಬೇಕೇ ಹೊರತು ಅಲ್ಲಿ ಸಿದ್ಧಾಂತಗಳ ವಾಸನೆಯೂ ಇರಕೂಡದು. ಯಾಕೆಂದರೆ, ಸಿದ್ಧಾಂತಗಳು ಬದುಕಿಗೆ ಮುಖ್ಯವೇನೋ ಹೌದು. ಆದರೆ ಇವೇ ಸಿದ್ಧಾಂತಗಳು ಬದುಕಿನ ಸಣ್ಣಪುಟ್ಟ ಖುಷಿ, ಜಗಳ, ನಂಬಿಕೆ ಮತ್ತು ಜೀವನಪ್ರೀತಿಗಳನ್ನು ಕಸಿದುಕೊಳ್ಳುತ್ತವೆ ಅಂತಾದರೆ ಅಂಥ ತರ್ಕ-ಸಿದ್ಧಾಂತಗಳಿಗೆ ಬೆಲೆಯಿಲ್ಲವೆಂದೇ ಅರ್ಥ.                      

   ಹೀಗಾಗಿ ವೈಯಕ್ತಿಕವಾಗಿ ನಾನು ಯಾವ ಪಂಥವನ್ನೂ ಅಷ್ಟಾಗಿ ತಲೆಗೆ ಹಚ್ಚಿಕೊಂಡಿಲ್ಲ. ಇಷ್ಟಕ್ಕೂ ‘ನಾನು ಎಡಪಂಥೀಯ, ನೀನು ಬಲಪಂಥೀಯ’ ಅಂತ ಲೇಬಲ್ ಹಚ್ಚುವ, ಹಚ್ಚಿಕೊಂಡಿರುವ ಮನುಷ್ಯ ತನ್ನ ದಾರಿಯನ್ನು ಆದಷ್ಟು ನ್ಯಾರೋ ಮಾಡಿಕೊಳ್ಳುತ್ತ ಹೋದರೆ, ಇನ್ನು 'ನಾನು ನಡುಪಂಥೀಯ!' ಅಂತ ತನ್ನನ್ನು ತಾನೇ ಘಂಟಾಘೋಷವಾಗಿ ಗೇಲಿ ಮಾಡಿಕೊಳ್ಳುತ್ತ ಎಲ್ಲವನ್ನೂ ಗಮನಿಸುತ್ತ ಸಾಗುವ ಮನುಷ್ಯ ತನ್ನ ದಾರಿಯನ್ನು ಅಗಲವಾಗಿಸಿಕೊಳ್ಳುತ್ತ ಹೋಗುತ್ತಾನೆ-

ಅಂತ ಯೋಚಿಸುತ್ತಿದ್ದಂತೆ ನನ್ನ ಗಾಡಿ ಆಫೀಸಿನ ಪಾರ್ಕಿಂಗ್ ಜಾಗ ತಲುಪಿತ್ತು. ಗಾಡಿ ನಿಲ್ಲಿಸಿ ಹೊರಡುತ್ತಿದ್ದಾಗ ರಸ್ತೆಯ ಬದಿಯಲ್ಲೊಂದು ಕೆಂಪು ಸ್ಕರ್ಟಿನ ಚೆಲುವೆ. ಒಂದು ಕ್ಷಣಭಂಗುರದ ಘಟನೆ ಮುಂದಿನ ಎರಡು ಸಾಲುಗಳನ್ನು ಬರೆಯುವಂತೆ ಒತ್ತಾಯಿಸುತ್ತಿದೆ. 

   ಮತ್ತೇನಿಲ್ಲ, ಮೇಲಿರುವವನು ಬಲು ಜಾಣ ಕಣ್ರೀ. ತುಂಟಗಾಳಿ ಸೃಷ್ಟಿಸುವವನೂ ಅವನೇ. ತೊಟ್ಟ ಸ್ಕರ್ಟು ಹಾರಿಸುವವನೂ ಅವನೇ. ಮತ್ತು, ಇದನ್ನೆಲ್ಲ ನೋಡಬಯಸಿದ ನೂರಾರು ಕಣ್ಣುಗಳಲ್ಲಿ ಧೂಳು ಚಿಮುಕಿಸುವವನೂ ಅವನೇ! ಇಲ್ಲಿ ಯಾರಿಗೆ ಯಾರು ಬೇಲಿ? ಯಾರಿಗೆ ಯಾರೋ ಪುರಂದರ ವಿಠಲ-ಅಂತ ದಾಸರ ಕ್ಷಮೆ ಕೋರುತ್ತ ನಡೆಯತೊಡಗಿದೆ..
                                                                               -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 13.09.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

                                

Wednesday, August 16, 2017

ಆಲಿಕಲ್ಲಿಗೆ ಉಸಿರು ತುಂಬುವ ಬೆಕ್ಕಿನಮರಿ!

ಹೊಸ್ತಿಲಿಗೆ ಬಂದ ಮಳೆ 
ದಿಟ್ಟಿಸುತ್ತಿರುವ ಮರಿಬೆಕ್ಕಿನ ಮುಗ್ಧತೆ
ಕವಿಮನದಲ್ಲಿ ಯಾಕೆ ಮೂಡುವದಿಲ್ಲ?

ಪ್ರಶ್ನೆ ಸರಳವಾಗಿರುವಂಥದ್ದು. ಬಹುಶಃ ಕಿರಿಕಿರಿಯಾಗುವಂಥದ್ದು. ಇಲ್ಲಿನ ಒಟ್ಟಾರೆ ಚಿತ್ರಣ ಹೀಗಿದೆ: 
ಮಳೆಯಾಗುತ್ತಿದೆ. ಆಲಿಕಲ್ಲಿನ ಮಳೆ. ಬಾಗಿಲಸಂದಿಯಲ್ಲಿ ನಿಂತುಕೊಂಡು ಮಳೆ ನೋಡುತ್ತಿರುವ ಈ ಬೆಕ್ಕಿನ ಮರಿಗೋ ಇದೆಲ್ಲ ಹೊಸತು. ಹೀಗಾಗಿ ಅಲ್ಲೊಂದು ಬೆರಗಿದೆ. ಹೊಸ್ತಿಲಾಚೆಯಿಂದ ಪುಟಿದು ಮನೆಯೊಳಗೆ ಬಂದು ಬೀಳುತ್ತಿರುವ ಆಲಿಕಲ್ಲುಗಳೊಂದಿಗೆ ಈ ಮರಿ ಚಿನ್ನಾಟವಾಡುತ್ತಲಿದೆ. ಏನು ಮಾಡಿದರೂ ಕೈಗೆ ಸಿಗದೇ ಕೊನೇಪಕ್ಷ ರೂಹೂ ದಕ್ಕದೇ ಬಿದ್ದ ಮರುಘಳಿಗೆಯಲ್ಲೇ ಜೀವ ಬಿಡುತ್ತಿರುವ ಈ ಆಲಿಕಲ್ಲುಗಳಿಗೆ ತನ್ನ ಚಿನ್ನಾಟದಿಂದಲೇ ಈ ಬೆಕ್ಕಿನಮರಿ ಉಸಿರು ತುಂಬುವ ಪ್ರಯತ್ನ ಮಾಡುತ್ತಿದೆ. ಅಷ್ಟೇ, ಮರಿಗೆ ಇದೊಂದು ಸೋಜಿಗ ಮತ್ತು ಮೋಜು. 

   ಆದರೆ ಕವಿಗೆ ಈ ಅದೃಷ್ಟವಿಲ್ಲ. ಆತ ಈ ಮಳೆಯನ್ನು ಆ ಮರಿಬೆಕ್ಕಿನಂತೆ ನೋಡಲಾರ. ಆತನ ಕವಿತ್ವವೇ ಆತನ ಮೊದಲ ಶತ್ರು. ಇದು ಶಾಪವೋ ವರದಾನವೋ, ಕವಿಗೆ ಯಾವಾಗಲೂ ದೂರದೃಷ್ಟಿ ಇರಬೇಕಂತೆ! ಹೀಗಾಗಿ, ಆತ ಈ ಮಳೆಗೊಂದು ಹಿನ್ನೆಲೆ ಸೃಷ್ಟಿಸತೊಡಗುತ್ತಾನೆ. ಬೆಕ್ಕಿನ ಬೆರಗಿಗೆ ಕಾರಣವಾಗಿದ್ದ ಹೊಸ್ತಿಲ ಆಸುಪಾಸಿಗಷ್ಟೇ ಸೀಮಿತವಾಗಿದ್ದ ಮಳೆಯೊಂದು ಕವಿಯ ಕ್ಯಾನವಾಸಿನಲ್ಲಿ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಲಿದೆ. ಅಲ್ಲಿ ಮಿಂಚು ಬರುತ್ತದೆ. ಗುಡುಗು ಬರುತ್ತದೆ. ಕಾಮನಬಿಲ್ಲಿನ ಸಮೇತ ಮಯೂರದ ನೃತ್ಯಯೂ ಪ್ರೇಯಸಿಯ ವಿರಹವೂ ಎಲ್ಲ ಬಂದು ಕೊನೆಗೊಮ್ಮೆ ಕಲಸುಮೇಲೋಗರವಾಗುತ್ತದೆ.

ಯಾಕೆಂದರೆ ಆತ ಕವಿ. ಯಾವತ್ತಿಗೂ ದಗ್ದ ಮತ್ತು ಪ್ರಕ್ಷುಬ್ದ. ಕವಿತೆ ಮಾತ್ರ ಆತನನ್ನು ಸಂತೈಸಬಲ್ಲದು. ಪೊರೆಯಬಲ್ಲದು.  
*
   ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮಲ್ಲಿ ಅನೇಕರು ಒಂದು ತಪ್ಪು ಮಾಡುತ್ತಿರುತ್ತೇವೆ. ನಮ್ಮ ಮಾತುಕತೆಗಳಲ್ಲಿ ಯಾರ್ಯಾರನ್ನೋ ಎಳೆದು ತರುತ್ತಿರುತ್ತೇವೆ. ಯಾವುದೋ ಒಂದು ವಿಷಯಕ್ಕೆ ಕುರಿತಂತೆ ನಮ್ಮ ನಮ್ಮ ವಾದಗಳಿಗೆ ಬಲ ತಂದು ಕೊಡುವದಕ್ಕೆಂದು ಅನೇಕ ದಿವ್ಯಚೇತನಗಳ ಲೇಬಲ್ಲುಗಳನ್ನು ಅಂಟಿಸುತ್ತೇವೆ. ನಮ್ಮ ತರಲೆ ಜೋಕುಗಳಲ್ಲಿ ಗಾಂಧೀ ಬರುತ್ತಿರುತ್ತಾನೆ. ಕವಿತೆಗಳಲ್ಲಿ ಬುದ್ಧ ಇಣುಕುತ್ತಿರುತ್ತಾನೆ. ಅಂತೆಯೇ ನಮ್ಮ ನಮ್ಮ ವಾದಕ್ಕೆ ಪುಷ್ಟಿ ಕೊಡಬಲ್ಲ ಯೇಸು, ಅಂಬೇಡ್ಕರ್, ಪರಮಹಂಸ, ರಾಮ. ಕೃಷ್ಣರೂ ಸಂದರ್ಭಾನುಸಾರವಾಗಿ ಯಥೋಚಿತವಾಗಿ ಬರುವದುಂಟು. 

   ಆದರೆ ಇವರೆಲ್ಲರನ್ನೂ ಉಚ್ಚರಿಸುವ ಮುನ್ನ ನಾವುಗಳು ಒಂದು ಅರ್ಥ ಮಾಡಿಕೊಳ್ಳಬೇಕಿದೆ. ಮಹಾತ್ಮ, ಬುದ್ಧ, ಪರಮಹಂಸ, ಮರ್ಯಾದಾ ಪುರುಷೋತ್ತಮ ಅಂತನ್ನುವದೆಲ್ಲ ಅವರವರ ಅಪ್ಪ ಅಮ್ಮಂದಿರು ಇಟ್ಟ ಹೆಸರುಗಳಲ್ಲ. ಹಾಗೆ ನೋಡಿದರೆ ಅವೆಲ್ಲ ನಾಮಪದಗಳೇ ಅಲ್ಲ. ಅದೊಂದು stage. ಒಂದು ಹಂತ. ಮಾನವೀಯತೆಯಲ್ಲಿಯೋ ಅಥವಾ ಅರಿವಿನಲ್ಲಿಯೋ ಅಥವಾ ಧ್ಯಾನದಲ್ಲಿಯೋ- ಎಲ್ಲೋ ಒಂದು ಕಡೆ ಅತ್ಯಂತ ಎತ್ತರದ ಜಾಗದಲ್ಲಿ ಕುಳಿತುಕೊಂಡ ಮೇಲೆ ನಮ್ಮ ಕೈವಶವಾಗಬಹುದಾದ ಒಂದು ಸ್ಥಿತಿಯದು.

   ಕವಿತೆ ಅನ್ನುವದೂ ಅಂಥದ್ದೇ ಜಾಗದ ಆಸುಪಾಸಿನಲ್ಲೇ ಉದ್ಭವಿಸುವಂಥದ್ದು. ಈ ಕವಿತೆ ಓದುಗರೊಂದಿಗೆ ಅನೇಕ ರೀತಿಯಲ್ಲಿ ಸಂಭಾಷಿಸುತ್ತದೆ. ಒಮ್ಮೊಮ್ಮೆ ಓದುಗನ ಬಳಿಗೆ ನೇರವಾಗಿ ಬಂದು ವಿಷಯ ತಿಳಿಸುತ್ತದೆ. ಒಮ್ಮೊಮ್ಮೆ ತೀರಾ ಹತ್ತಿರ ಬಂದರೂ ಕೈಸನ್ನೆ, ಬಾಯಿಸನ್ನೆ ಮಾಡುತ್ತ 'ಇಲ್ಲಿ ಹೇಳಲಾಗದು, ಅಲ್ಲಿ ಬಾ' ಅಂದು ಹೊರಟು ಹೋಗುತ್ತದೆ. ಅಲ್ಲಿಗೆ ಓದುಗನ ಕತೆ ಮುಗಿದಂತೆ. ಹೀಗಾದಾಗ ಓದುಗ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಹೀಗೆ ಕಣ್ಣಿಗೆ ಕಾಣಿಸುವ ಅಕ್ಷರಗಳು ತಮ್ಮಲ್ಲೊಂದು ಹಿಡನ್ ಸಂಜ್ಞೆಗಳನ್ನೂ ಇಟ್ಟುಕೊಂಡಿರುತ್ತವೆ. ಬೇಕಾದರೆ ಈ ಪುಟ್ಟ ಹಾಯ್ಕು ನೋಡಿ, 
  
ಮನೆಯತ್ತ ಪಯಣ. 
ರಸ್ತೆಯಂಚಿನ ಗೂಟಕಲ್ಲಿನಲ್ಲಿ 
ಕಿಲೋಮೀಟರ್ ಜೊತೆಗಿದೆ
ಒಂದು ಅಗೋಚರ ಸ್ಮೈಲೀ!

   ಹೀಗೆ ಈ ಲೋಕದ ಎಲ್ಲ ಕವಿತೆಗಳೂ ಒಂದಿಷ್ಟು ಬಗೆಯ ಸೂತ್ರಗಳಲ್ಲಿ ಬಂಧಿತವಾಗಿವೆ. ಹಾಗೆ ಬಂಧಿತವಾಗುವ ಸೂತ್ರಗಳ ಪೈಕಿ ಕೆಲವನ್ನು ಹೆಸರಿಸಬಹುದಾದರೆ ಮೊದಲಿಗೆ ಬಂದು ನಿಲ್ಲುವ ಸೂತ್ರ ಅಲಂಕಾರ. ಒಮ್ಮೊಮ್ಮೆ ಇದು ಸಾಂಕೇತಿಕವಾಗಿದ್ದರೆ, ಒಮ್ಮೊಮ್ಮೆ ಉತ್ಪ್ರೇಕ್ಷೆಯಿಂದ ಕೂಡಿರುತ್ತದೆ. 'ಅವಳನ್ನು ಮುಟ್ಟಿದ ಕೂಡಲೇ ಮೈಯಲ್ಲಿ ಮಿಂಚು ಹರಿದಂತಾಯಿತು' ಅಂತನ್ನುವ ಕವಿಗೆ ತಾನು ಸತ್ಯಕ್ಕಿಂತ ಕೊಂಚ ಹೆಚ್ಚಿನದನ್ನು ಹೇಳುತ್ತಿದ್ದೇನೆ ಅಂತನ್ನುವ ಸ್ಪಷ್ಟ ಅರಿವಿದೆ. ಆದರೆ ಇಲ್ಲಿ ಕೇವಲ ಆತನ ಎಕ್ಸೈಟ್ ಮೆಂಟ್ ಮಾತ್ರ ನೋಡಬೇಕೇ ಹೊರತು ವಿಜ್ಞಾನವನ್ನಲ್ಲ. 

   ಇದೇ ರೀತಿ ಕವಿತೆಯ ಒಂದು ಅತಿ ಮುಖ್ಯ ಭಾಗವೆಂದರೆ ಕವಿ ಬಳಸುವ ನಿರೂಪಣಾ ವಿಧಾನ. ಯಾವುದೇ ಕವಿತೆ ತನ್ನ ಒಡೆಯ ಕಟ್ಟಿಕೊಡುತ್ತಿರುವ ಚಿತ್ರಣದ ಮೇಲೆಯೇ ತನ್ನ ಭವಿಷ್ಯವನ್ನು ಕಂಡುಕೊಳ್ಳುತ್ತಿರುತ್ತದೆ. ಹೀಗಾಗಿ ನಿರೂಪಣೆ ಅನ್ನುವದು ಇಡೀ ಕವಿತೆಯ ಅಡಿಪಾಯ. ಕವಿಯ ನೋಟ ಅಥವಾ ಕವಿಯ ರುಚಿ ಅಥವಾ ಕವಿಯ ಪರಿಮಳ- ಈ ಅಡಿಪಾಯಕ್ಕೆ ಒದಗಿಬರುವ ಸಿಮೆಂಟಿನ ಸರಕುಗಳು. ಕವಿತೆ ಓದಿದ ಬಳಿಕ ಇವೆಲ್ಲವೂ ಓದುಗರ ಮನದಲ್ಲಿ ಪ್ರತಿಫಲಿಸಿದಾಗಲೇ ಆಯಾ ಕವಿತೆ ಸಾರ್ಥಕದ ಉಸಿರು ಬಿಡುತ್ತದೆ. ಕವಿ ಕಟ್ಟಿಕೊಡುತ್ತಿರುವ ಈ ಕೆಳಗಿನ ದೃಶ್ಯ ನೋಡಿ:

ನೀರಿಗೆಂದು ಬಂದ ನೀರೆಯರು 
ಚಂದಿರನ ಮೇಲೆ ಮೋಹಿತರು;
ಇಲ್ಲೀಗ ನೂರು ಕೊಡಗಳಲ್ಲೂ 
ನೂರು ಪೂರ್ಣ ಚಂದಿರರು!

   ಹೌದು, ಒಂದು ಕವಿತೆಯನ್ನು ಹೇಗೆ ಓದಬೇಕೆಂದು ನಿರ್ದೇಶಿಸುವದು ಅಲ್ಲಿರುವ ಚಿಹ್ನೆಗಳು. ಓದಿನ ಪಯಣದಲ್ಲಿ ಅವು ಓದುಗರಿಗೆ ಎಲ್ಲಿ ವಿರಮಿಸಬೇಕೆಂದೂ ಎಲ್ಲಿ ವಿಸ್ತರಿಸಗೊಳಿಸಬೇಕೆಂದೂ ಮತ್ತು ಎಲ್ಲಿ ಉನ್ಮಾನದಿಂದ ಕಂಗೊಳಿಸಬೇಕೆಂದೂ ಸೂಚಿಸಬಲ್ಲವು. ಹೀಗೆ ಹಾಡಿನ ಹಾದಿಯಲ್ಲಿ ಈ ಚಿಹ್ನೆಗಳು ತೋರುಫಲಕಗಳಂತೆ ಗೋಚರಿಸಬೇಕೆಂದರೆ ಇಡೀ ಹಾಡು ಒಂದು ನಿಗದಿತ ಶಬ್ದ ಹೊರಡಿಸುತ್ತಿರಬೇಕು. ಆ ಶಬ್ದದಲ್ಲಿ ಒಂದು ಸಂಗೀತದ ಸ್ವರವಿರಬೇಕು. 'ತೂಗಿರೇ ರಾಯರ ತೂಗಿರೇ ಗುರುಗಳ ತೂಗಿರೇ ಯತಿಕುಲ ತಿಲಕರ..' ಅನ್ನುವಂಥ ಜಗನ್ನಾಥದಾಸರ ಕೀರ್ತನೆಯನ್ನು ಓದುವಾಗ ಹೊರಡಬಹುದಾದ ಶಬ್ದ ಮತ್ತು ಸ್ವರಗಳನ್ನು ಗಮನಿಸಿ. ದಾಸ ಸಾಹಿತ್ಯದಲ್ಲಿ ಈ ರೀತಿಯ ಅನೇಕ ಸಂಯೋಜನೆಗಳನ್ನು ಕಾಣಬಹುದು.

   ಕೊನೆಯದಾಗಿ, ಯಾವುದೇ ಒಂದು ಕವಿತೆಯು ಓದುಗನ ಗಮನವನ್ನು ಸೆಳೆಯಲು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಲಯದ ಮೊರೆ ಹೋಗೇಹೋಗುತ್ತದೆ. ಒಂದು ಲಯ ಅಥವಾ ಮೀಟರ್ ಆಯಾ ಕವಿತೆಯ ಬಗ್ಗೆ ಓದುಗನೆಡೆಗೊಂದು ಅಭಯವನ್ನು ಕೊಡುವಂಥದ್ದು. ಅಯ್ಯ, ನಿನ್ನ ಓದಿನ ಓಘಕ್ಕೆ ನಾನು ಜೊತೆ ಕೊಡುತ್ತೇನೆ ಅಂತ ಅಭಯ ನೀಡುತ್ತಿರುತ್ತದೆ. ಹೀಗೆ ಕವಿತೆಯಿಂದ ಗ್ಯಾರಂಟಿ ಪಡೆದುಕೊಂಡ ಓದುಗ ಸದರಿ ಕವಿತೆಯನ್ನು ಓದುವಾಗ ಪ್ರತಿ ಸಾಲಿನಲ್ಲೂ ಒಂದೊಂದು ರಿದಮ್ ಅನುಭವಿಸುತ್ತಾನೆ. ಈ ರಿದಮ್ ಓದುಗನಲ್ಲಿ ಆಕಸ್ಮಿಕವಾಗಿ ಘಟಿಸುವಂಥದ್ದಾದರೂ ಕವಿಯೊಳಗೆ ಮಾತ್ರ ಈ ಲಯ ಪೂರ್ವಯೋಜಿತ. ದ್ವಿಪದಿ, ತ್ರಿಪದಿ, ಷಟ್ಪದಿ, ಸಾನೆಟ್ ಗಳೆಲ್ಲ ನಿರ್ಮಾಣ ಹಂತದ ಮೂಲದಲ್ಲೇ ಒಂದು ಲಯವನ್ನು ಅಳವಡಿಸಿಕೊಂಡಿರುವಂಥವು. ಇನ್ನು ಕೆಲವರು ಕವಿತೆಯಲ್ಲಿನ ಸಾಲುಗಳಲ್ಲಿ ಇಂಥದೊಂದು ಮೀಟರನ್ನು ಕಲ್ಪಿಸುತ್ತಾರೆ. ಯಾವತ್ತೋ ಒಮ್ಮೆ ಕುಶಾಲಿಗೆಂದು ಬರೆದಿದ್ದ ಈ ಕವಿತೆಯಲ್ಲಿ ಅಲ್ಲಲ್ಲಿ ಕಾಣುವ ರಿದಂ ಗಮನಿಸಿ:

ಎಷ್ಟು ದರಿದ್ರ ರಸ್ತೆಯಿದು?
ಕಲ್ಲು ಮುಳ್ಳುಗಳ ಕಡಿದಾದ ದಾರಿ. 
ಒಂದು ಬಸ್ಸಿಲ್ಲ ಟ್ರೈನಿಲ್ಲ ವಿಮಾನವಿಲ್ಲ;
ಸುಡುವ ನೆತ್ತಿಗೆ ನೆರಳಿಲ್ಲ, ಕಣ್ಣಕತ್ತಲೆಗೆ ಬೆಳಕಿಲ್ಲ 
ಟೈಂಪಾಸಿಗೆ ಪದ್ಯವಿಲ್ಲ ಮದ್ಯವಿಲ್ಲ ಚುರೂಟವಿಲ್ಲ.
ಇತ್ತ-ಆರು ಬೆಟ್ಟಗಳ ಮಧ್ಯೆ ಕರೆಂಟು ಕಂಬಗಳಿಲ್ಲ
ಅತ್ತ-ಹೆಗಲಿಗೆ ಕಂಬಹೊರದೇ ಕರೆಂಟು ಹರಿಯುವದಿಲ್ಲ. 
ಇಷ್ಟೆಲ್ಲ ಇಲ್ಲಗಳನ್ನು ದಾಟಿಕೊಂಡು 
ಹೋದಮೇಲೆ ಅಲ್ಲಿ ಸಿಗುವದಾದರೂ ಏನು?
-ಅಂತ ಅಲ್ಲಿನ ಬುದ್ಧನಿಗೆ ಕೇಳೋಣವೆಂದರೆ
ಆತನ ಬಾಗಿಲಿಗೆ ಬರೆಯಲಾಗಿದೆ: ನಾಳೆ ಬಾ!
*

   ಇದೆಲ್ಲ ಹೇಳುತ್ತಿರುವಾಗಲೇ ನನಗೆ ಥಟ್ಟಂತ ಹೊಳೆದಿದ್ದೇನು? ಹಾಗೊಂದು ವೇಳೆ ಇಲ್ಲಿ ಕವಿ 'ಆಲಿಕಲ್ಲಿನ ಮಳೆ' ಎಂಬ ಕವಿತೆ ರಚಿಸುತ್ತಿದ್ದಾನೆ ಅಂದುಕೊಂಡರೆ ಇಲ್ಲಿ ಓದುಗ ಯಾರು?                                                              
ಬಹುಶಃ ಬೆಕ್ಕಿನಮರಿ ಬಳಿ ವಿಚಾರಿಸಿದರೆ ಉತ್ತರ ಸಿಗಬಹುದೇನೋ.. 
                                                                                -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 16.08.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ) 

Wednesday, August 2, 2017

ಒಂದು ಕಿಲಾಡಿ ಕೃತ್ಯ ಹೆಣೆದ ಬೇಗುದಿಯ ಜಾಲಗಳು

ಹೆಣ್ಣು ಮಿಡತೆಗೆ
ವೈಧವ್ಯ ತಂದಿಟ್ಟ ಬೆಕ್ಕು
ಕಳ್ಳ ನಿದ್ರೆಯಲ್ಲಿದೆ!

ಜಾಪಾನಿನ ಕಿಕಾಕು ಎಂಬ ಹಾಯ್ಕುಕವಿ ಈ ಲೋಕದ ಕಪಟತನವನ್ನು ಸಹಜತೆಯೊಂದಿಗೆ 
ಮುಗುಮ್ಮಾಗಿ ತಳಕು ಹಾಕುವದು ಹೀಗೆ. ಕುತೂಹಲವೆಂದರೆ, ಪುರಾತನ ಅರವತ್ನಾಲ್ಕು ಕಲೆಗಳಲ್ಲಿ ಚೋರಮಾರ್ಗವೂ ಬರುತ್ತದೆ. ಪರಶುರಾಮರಲ್ಲಿ ವಿದ್ಯೆ ಕಲಿಯಲು ಕರ್ಣ ಕಳ್ಳದಾರಿ ಬಳಸುತ್ತಾನೆ. 
ಅದೇ ವಿದ್ಯೆ ಕಸಿಯಲು ದ್ರೋಣ ಕಳ್ಳದಾರಿಯಿಂದಲೇ ಶಿಷ್ಯನ ಹೆಬ್ಬೆರಳು ಕತ್ತರಿಸುತ್ತಾನೆ. 
ಮುಂದೊಮ್ಮೆ ಇದೇ ದಾರಿಯನ್ನೇ ಬಳಸಿಕೊಳ್ಳುವ ಧರ್ಮರಾಯ ಅದೇ ದ್ರೋಣನ ಸಾವಿಗೆ 
ಕಾರಣನಾಗುತ್ತಾನೆ. ವಾಲಿಯನ್ನು ಕೊಲ್ಲಲು ರಾಮನೂ ಇದೇ ಕಳ್ಳದಾರಿ ಬಳಸುತ್ತಾನೆಂದರೆ ಇನ್ನು 
ನಮ್ಮಂಥವರ ಪಾಡೇನು?

   ಫೇಸ್ ಬುಕ್ಕಂತೂ ಸರಿಯೇ ಸರಿ. ಇಲ್ಲಿ ಒಬ್ಬರ ಸಾಹಿತ್ಯವನ್ನು ಇನ್ಯಾರೋ ಕದ್ದು ತಮ್ಮದು ಅಂತ ಬರೆದುಕೊಳ್ಳುವದನ್ನು ಆಗೀಗ ನೋಡುತ್ತಿರುತ್ತೇವೆ. ಇದರಿಂದ ಮೂಲಬರಹಗಾರರಿಗೆ ಉಂಟಾಗುವ 
ನೋವು, ಸಿಟ್ಟು ಮತ್ತು ಬೇಸರಗಳನ್ನು ನಾನು ಬಲ್ಲೆ. ಇಷ್ಟಾದರೂ ಇಂಥ ಕಳ್ಳದಾರಿಗಳ ಕುರಿತಂತೆ 
ನನ್ನ ದೃಷ್ಟಿಕೋನ ಕೊಂಚ ಭಿನ್ನವಾಗಿದೆ. ಹೀಗೆ ಇನ್ನೊಬ್ಬರ ಕತೆ, ಕವಿತೆಗಳನ್ನು ಕದಿಯುವವರ ಬಗ್ಗೆ ನನಗೆ ಸಹಾನುಭೂತಿಯಿದೆ. ಯಾಕೆಂದರೆ ಇವರಿಗೆ ಸಾಹಿತ್ಯದ ಬಗ್ಗೆ ಒಲವಿದೆ. ಆದರೆ ಸದ್ಯಕ್ಕೆ ಅವರಿಗೆ ಕವಿತಾರಚನಾ ಸಾಮರ್ಥ್ಯ ಒಲಿದಿಲ್ಲ ಅಷ್ಟೇ. ಇಂಥವರಿಗೆ ಅವಮಾನ ಮಾಡುವದಕ್ಕಿಂತ ಕೊಂಚ ಪ್ರೀತಿಯಿಂದ ತಿಳಿಹೇಳಿದರೆ ಅವರಿಗೂ ತಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಬಹುದು. ಮುಂದೊಮ್ಮೆ ಸಾಹಿತ್ಯ ರಚನೆಯ ಅಮಲು ಅವರಿಗೂ ಅಂಟಬಹುದು.   
                                                           
   ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು. ಆಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ್ದೆ. ಪಾಕೆಟ್ ಮನಿ ಅಂತ ಎಂಥದ್ದೂ ಇರಲಿಲ್ಲ. ಕೈಗೆನೋ ಹೊಸ ಸೈಕಲ್ ಬಂದಿತ್ತು. ಗೆಳೆಯರು ಕ್ಯಾಂಟೀನಿನಲ್ಲಿ ಆಗೀಗ ಚಹಾ ಕುಡಿಸುತ್ತಿದ್ದರು. ನನ್ನ ಹತ್ತಿರ ಹಣ ಇರುತ್ತಿರಲಿಲ್ಲವಾದ್ದರಿಂದ ನಾನು ಅವರಿಗೆಲ್ಲ ಒಮ್ಮೆಯಾದರೂ ಒಂದು ತೊಟ್ಟು ಚಹಾ ಕುಡಿಸುವದು ಸಾಧ್ಯವೇ ಇರಲಿಲ್ಲ. ಹೀಗಾಗಿ ಗೆಳೆಯರು ಕ್ಯಾಂಟೀನಿಗೆ ಕರೆದಾಗಲೆಲ್ಲ ನಾಲ್ಕು ಸಲ ತಪ್ಪಿಸಿಕೊಳ್ಳುವದು, ಐದನೇ ಬಾರಿ ಏನೋ ಉಪಕಾರ ಮಾಡುತ್ತಿರುವವನಂತೆ ಅವರೊಂದಿಗೆ ಸೇರಿಕೊಳ್ಳುತ್ತಿದ್ದೆ. 

   ದಿನಗಳು ಉರುಳುತ್ತಿದ್ದವು. ಒಂದು ದಿನ ಸಾಯಂಕಾಲ ಯಥಾಪ್ರಕಾರ ಮನೆಯ ಹತ್ತಿರವಿದ್ದ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಗೆಳೆಯನೊಬ್ಬ ಮಾತುಮಾತಿನಲ್ಲೇ ತನ್ನ ಪರ್ಸಿನೊಳಗಿಂದ ಮುದ್ದೆಮುದ್ದೆಯಾಗಿದ್ದ ಐನೂರರ ನೋಟು ಹೊರತೆಗೆದು ನನ್ನ ಕೈಗಿಟ್ಟ. ಮುದ್ದೆ ಬಿಡಿಸಿ ನೋಡಿದರೆ ಏನಿತ್ತು? ಐನೂರು ನೋಟನ್ನು ನೀಟಾಗಿ ಹರಿದು ಹಾಕಲಾಗಿದ್ದ ಐದು ತುಂಡುಗಳು. ಆರನೇ ತುಂಡು ಮಾತ್ರ ಇಲ್ಲ! 'ಅದೇನು ಮಾಡ್ತೀಯೋ ಮಾಡ್ಕೋ!' ಅನ್ನುವ ಶೈಲಿಯಲ್ಲಿ ಆ ಐದೂ ತುಂಡುಗಳನ್ನು ನನ್ನ ಕೈಗಿಟ್ಟು ಹೋಗಿಬಿಟ್ಟಿದ್ದ. ಆವತ್ತು ಊಟ ಮುಗಿಸಿ ಮಲಗಿದವನಿಗೆ ಏನೇನೋ ಯೋಚನೆಗಳು. ಕಳೆದುಹೋಗಿದ್ದ ಆರನೇ ತುಂಡು ದಿಢೀರಂತ ಸಿಕ್ಕಂತೆ, ಐನೂರರ ನೋಟು ಚಲಾವಣೆಯಾದಂತೆ, ಕಾಲೇಜಿನಲ್ಲಿ ಗೆಳೆಯರಿಗೆ ಪಾರ್ಟಿ ಕೊಟ್ಟಂತೆ- ಏನೇನೋ ಕನಸು ಬಿದ್ದು ಸರಿಯಾಗಿ ನಿದ್ರಿಸಲಾಗಿರಲಿಲ್ಲ.  

   ಬೆಳಿಗ್ಗೆ ಏಳುತ್ತಿದ್ದಂತೆ ತಲೆಯಲ್ಲಿ ಏನೇನೋ ಅಸ್ಪಷ್ಟ ಕಲ್ಪನೆಗಳು. ತಕ್ಷಣ ಇನ್ನೊಬ್ಬ ಗೆಳೆಯನ 
ಮನೆಯತ್ತ ಧಾವಿಸಿ ಆತನಿಗೆ ಐನೂರರ ನೋಟಿನ ವಿಷಯ ತಿಳಿಸಿದೆ. ಇಬ್ಬರ ತಲೆಯಲ್ಲೂ ಭಯಂಕರ ಐಡಿಯಾ. ಈ ಗೆಳೆಯನ ಬಂಧುವೊಬ್ಬ ಯಾವುದೋ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಆಗಿದ್ದ. ಹೀಗಾಗಿ ಆತನ ಬಳಿ ಸಾಕಷ್ಟು ಪಿಗ್ಮಿ ಹಣ ಯಾವಾಗಲೂ ಇದ್ದೇ ಇರುತ್ತಿತ್ತು. ಏನೇನೋ ಕಾರಣ ಹೇಳಿ ಆತನಿಂದ ಐನೂರರ ಹೊಸ ನೋಟೊಂದನ್ನು ಸಾಲ ಪಡೆದು ಇಬ್ಬರೂ ಮನೆಗೆ ಹಿಂದಿರುಗಿದೆವು. ನಂಬಿದರೆ ನಂಬಿ ಬಿಟ್ಟರೆ ಬಿಡಿ:  ಪಿಗ್ಮಿಯಿಂದ ಬಂದಿದ್ದ ಆ ಐನೂರರ ನೋಟನ್ನು ಎದುರಿಗಿಟ್ಟುಕೊಂಡು, ನಮ್ಮಲ್ಲಿದ್ದ ಐದು ತುಂಡುಗಳನ್ನು ಅಂಟಿನಿಂದ ಜೋಡಿಸಿ, ಕಳೆದುಹೋಗಿದ್ದ
ಆರನೇ ತುಂಡಿನಲ್ಲಿ ಏನೇನು ಇರಬೇಕಿತ್ತೋ ಅದೆಲ್ಲವನ್ನೂ ಬಿಳಿಹಾಳೆಯ ಮೇಲೆ ಕೇವಲ ಬಣ್ಣದ ಪೆನ್ಸಿಲ್ ನಿಂದ ಡ್ರಾಯಿಂಗ್ ಬಿಡಿಸಿ, ಅದನ್ನು ಆರನೇ ತುಂಡು ಕೂರುವ ಜಾಗದಲ್ಲಿ ಕೂರಿಸಿ- ಮೊದಲ ನೋಟಕ್ಕೆ ಒಂಚೂರೂ ಅನುಮಾನ ಬಾರದ ಹಾಗೆ ಕೇವಲ ಎರಡು ಗಂಟೆಗಳಲ್ಲಿ ಹೊಸ ನೋಟು ಉದ್ಭವವಾಗಿತ್ತು. 

   ಅಷ್ಟು ಅದ್ಭುತವಾಗಿ ಚಿತ್ರ ಬಿಡಿಸಿದ್ದ ಗೆಳೆಯನಿಗೆ ನಾನದನ್ನು ಏನು ಮಾಡುವೆನೆಂಬ ಕಲ್ಪನೆಯೂ ಇರಲಿಕ್ಕಿಲ್ಲ. ಅವನಿಗೆ ಅಂತಲ್ಲ, ಸ್ವತಃ ನನಗೇ ಈ ಐನೂರರ ನೋಟನ್ನು ಏನು ಮಾಡುವದೆಂದು ಗೊತ್ತಿರಲಿಲ್ಲ. ಎರಡು ದಿನ ಅದು ಸುಮ್ಮನೇ ನನ್ನ ಪುಸ್ತಕದ ಮಧ್ಯೆ ಮಲಗಿತ್ತು. ಮೂರನೇ ದಿನ ಯಾವಾಗ ಮನೆಯಲ್ಲಿ ಔಷಧಿ, ಮಾತ್ರೆ ತರಲೆಂದು ಐವತ್ತು ರೂಪಾಯಿ ಕೈಗಿಟ್ಟರೋ, ಅಲ್ಲಿಂದ ಶುರುವಾಯಿತು ಎದೆಯಲ್ಲಿ ಡವಡವ. ನನ್ನ ಈ ದಂಡಯಾತ್ರೆಯ 
ಕಳ್ಳಮಾರ್ಗದಲ್ಲಿ ಒಂದು ಅಡೆತಡೆಯಿತ್ತು. ನನ್ನದೇ ಹೊಸ ಸೈಕಲ್ಲು ಇತ್ತಾದರೂ ಅದನ್ನು ಈ ಘನಕಾರ್ಯಕ್ಕೆ ಬಳಸುವಂತಿರಲಿಲ್ಲ. ಗ್ಯಾರೇಜಿನಲ್ಲಿ ಪೇಂಟು ಹೊಡೆಯುತ್ತಿದ್ದ ಗೆಳೆಯನೊಬ್ಬನ ಚಾಕಚಕ್ಯತೆ ಪರೀಕ್ಷಿಸಲೆಂದು ನನ್ನ ಸೈಕಲ್ಲಿಗೆ ಅರ್ಧ ಹಳದಿ, ಇನ್ನರ್ಧ ಕೆಮ್ಮಣ್ಣು ಬಣ್ಣವನ್ನು ಹೊಡೆಸಿದ್ದೆ. ಹ್ಯಾಂಡಲ್ಲಿಗೆ ಕ್ಯಾಸೆಟ್ಟಿನ ಟೇಪ್ ಎಳೆಗಳನ್ನು ಗೊಂಚಲುಗೊಂಚಲಾಗಿ ಎಳೆಬಿಟ್ಟಿದ್ದೆ. ಸೈಕಲ್ ಮಧ್ಯದ ಟ್ರಯಾಂಗಲ್ ಬಾರ್ ಗಳ ಮೇಲೆ ಅದೆಂಥದೋ ಚೀನೀ ಅಕ್ಷರಗಳನ್ನು ರೇಡಿಯಂ ಸ್ಟಿಕ್ಕರ್ ನಿಂದ ಅಂಟಿಸಿ, ಯಾರಾದರೂ ಕೇಳಿದರೆ 'ಅದು ನನ್ನದೇ ಹೆಸರು ಮಾರಾಯ' ಅಂತ ಪುಂಗಿ ಬಿಡುತ್ತಿದ್ದೆ. ಹೀಗಿದ್ದ ನನ್ನ ಈ ವಾಹನಕ್ಕೆ 'ಗೌಳೇರ ಎಮ್ಮೆ' ಅಂತ 
ಹೆಸರಿಟ್ಟಿದ್ದೆ!  

   ಖಂಡಿತವಾಗಿಯೂ ಊರಲ್ಲಿ ಅಷ್ಟು ಅಸಡ್ಡಾಳ ಬಣ್ಣ ಹೊಡೆಸಿಕೊಂಡು ವಿಚಿತ್ರ ಅಲಂಕಾರ 
ಮಾಡಿಸಿಕೊಂಡಿದ್ದ ಸೈಕಲ್ಲು ನನ್ನೊಬ್ಬನದೇ ಆಗಿತ್ತೇನೋ. ಹೀಗಾಗಿ ನನ್ನ ದಂಡಯಾತ್ರೆಗೆ ಈ 
'ಎಮ್ಮೆ'ಯನ್ನು ಕರೆದೊಯ್ಯುವಂತಿರಲಿಲ್ಲ. ನೋಟಿನ ಚಿತ್ರ ಬಿಡಿಸಿದ್ದ ಗೆಳೆಯನ ಬಳಿ ಸೈಕಲ್ 
ಪಡೆದು ಪೆಡಲ್ ತುಳಿಯತೊಡಗಿದೆ. ಆಗಷ್ಟೇ ಹೊಸದಾಗಿ ಶುರುವಾಗಿದ್ದ ಔಷಧಿ ಅಂಗಡಿಯದು. 
ಸಿಕ್ಕಾಪಟ್ಟೆ ರಿಯಾಯಿತಿ ಕೊಡುತ್ತಿದ್ದುದರಿಂದ ಆ ಅಂಗಡಿ ಯಾವಾಗಲೂ ಹತ್ತು ಹದಿನೈದು 
ಗಿರಾಕಿಗಳಿಂದ ಗಿಜಿಗಿಡುತ್ತಿತ್ತು. ಕೆಲಸಗಾರ ಮತ್ತು ಮಾಲೀಕ ಎರಡೂ ಒಬ್ಬನೇ ಆಗಿದ್ದ ಆಸಾಮಿ 
ಅವಸರವಸರವಾಗಿ ಅತ್ತಂದಿತ್ತ ಓಡಾಡುತ್ತಿದ್ದ. ನಿಧಾನಕ್ಕೆ ಗುಂಪಿನಲ್ಲಿ ಸೇರಿಕೊಂಡ ನಾನು ಔಷಧಿ 
ಚೀಟಿ ತೋರಿಸುತ್ತ ಕೊಂಚ ಜೋರಾಗಿ ಕಿರುಚಿದ್ದೆ. ಪಾಪ, ಅವಸರದಲ್ಲಿದ್ದ ಆತ ನನ್ನ ಚೀಟಿ ನೋಡಿದವನೇ ಎಲ್ಲ ಔಷಧಿಗಳನ್ನು ತಂದಿಟ್ಟು ಹಣ ಕೇಳಿದ್ದಕ್ಕೆ, ಜೇಬಿನಲ್ಲಿದ್ದ ನವವಧುವಿನ ಮುಖ ಕಾಣಿಸದ ಹಾಗೆ ಸೀದಾ ಆತನ ಮುಖಕ್ಕೆ ಹಿಡಿದಿದ್ದೆ. ಓಡುತ್ತಲೇ ತನ್ನ ಗಲ್ಲಾಪೆಟ್ಟಿಗೆಯತ್ತ ಹೋದ ಆಸಾಮಿ ನೀಟಾಗಿ ನಾನೂರಾ ಐವತ್ತಕ್ಕೂ ಹೆಚ್ಚಿನ ಮೊತ್ತವನ್ನು ನನ್ನ ಕೈಗಿಟ್ಟಿದ್ದ! 

   ಅಷ್ಟೇ, ಹೋಗುವಾಗ ಮನೆಯಿಂದ ಕೇವಲ ಐದು ನಿಮಿಷದ ಹಾದಿಯಾಗಿದ್ದ ಕಳ್ಳದಾರಿ, ಅಲ್ಲಿಂದ 
ಹಿಂತಿರುಗಿ ಬರುವಾಗ ಅರ್ಧಗಂಟೆಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿತ್ತು. ಔಷಧಿ ಅಂಗಡಿಯಿಂದ ಹೊರಡುವಾಗ ಆ ಆಸಾಮಿಗೆ ಇದ್ದಕ್ಕಿದ್ದಂತೆ ನನ್ನ ಕರಾಮತ್ತು ಗೊತ್ತಾಗಿ ದಿಢೀರಂತ ಯಾವುದಾದರೂ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದುಬಿಟ್ಟರೇ? ಹಾಗಾಗಿ ಅಂಗಡಿಯಿಂದ ಸೀದಾ ಮನೆಗೆ ಹೋಗದೇ ಯಾವುದ್ಯಾವುದೋ ಸಂದಿಯಲ್ಲಿ ಸಾಗುತ್ತ ಇಡೀ ಊರನ್ನು ಸುತ್ತು ಹೊಡೆದು ಕೊನೆಗೆ ಹೇಗೋ ಮನೆ ತಲುಪಿದ್ದೆ. ಅದೊಂದು ಅದ್ಭುತ ಸಾಯಂಕಾಲವಾಗಿತ್ತು. ಕುಶಾಲಿಗೆಂದು ಹರಿದ ನೋಟು ಕೊಟ್ಟಿದ್ದ ಗೆಳೆಯನನ್ನು ಹುಡುಕಾಡಿ ವಗ್ಗರಣೆ ಗಿರಮಿಟ್ಟು, ಎರಡು ಮಿರ್ಚಿಬಜಿ ಕೊಡಿಸಿದ್ದೆ. ಆತನಿಗೆ ಅಚ್ಚರಿ. 'ಏನಾತಪೋ, ವಗ್ಗರಣಿ ಗಿಗ್ಗರಣಿ ಕೊಡಿಸ್ತಾ ಇದೀಯಲ್ಲ?' ಅಂತ ಕೇಳಿದವನಿಗೆ, 'ಏನಿಲ್ಲಪ, ಸುಮ್ಮನೇ ಬ್ಯಾಸರ ಆತು' ಅಂತ ಮುಗುಮ್ಮಾಗಿ ಹೇಳಿ ಆತನನ್ನು ಇನ್ನಷ್ಟು ಕಂಗಾಲು ಮಾಡಿದ್ದೆ. 

   ಅದೆಲ್ಲ ಆಗಿ ಇಷ್ಟು ವರ್ಷಗಳಾದ ಬಳಿಕ ಮೊನ್ನೆ ಪುರಾತನ ಗೆಳೆಯನಿಗೆ ಫೋನು ಮಾಡಿದೆ. ಆತನಿಗೆ 'ಹೀಗೀಗೆ' ಅಂತ ಹಳೆಯ ಕತೆಯನ್ನೆಲ್ಲ ಹೇಳಿದೆ. ಗೆಳೆಯ ಬಿದ್ದುಬಿದ್ದು ನಗುತ್ತಿದ್ದ. ನಿನ್ನ ಅಕೌಂಟಿಗೆ ಐನೂರು ರೂಪಾಯಿ ಹಾಕುತ್ತಿರುವದಾಗಿಯೂ, ಅದನ್ನು ಆ ಅಂಗಡಿಯವನಿಗೆ ತಲುಪಿಸಿ, ನನ್ನ ಕತೆಯನ್ನೆಲ್ಲ ಹೇಳಿ, ಆತ ಅದನ್ನೆಲ್ಲ ನಂಬಿದ್ದೇ ಆದಲ್ಲಿ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿಸಬೇಕೆಂದೂ, ನಾನು ಆತನಲ್ಲಿ ಕ್ಷಮೆ ಕೇಳುವದಾಗಿಯೂ ವಿನಂತಿಸಿಕೊಂಡೆ. ಈ ಗೆಳೆಯನಿಗೆ ಏನನಿಸಿತೋ, ತಕ್ಷಣ "ಹಂಗಾದ್ರೆ ನಾನೂ ಅರ್ಧ ಕೊಡ್ತೀನಿ, ಯಾಕೆಂದರೆ ಡ್ರಾಯಿಂಗ್ ಬಿಡಿಸಿದವನು ನಾನು" ಅಂದುಬಿಟ್ಟ. ಇಷ್ಟು ವರ್ಷಗಳಾದರೂ ಗೆಳೆಯನಿಗೆ ನಾನು ಆ ನೋಟನ್ನು ಎಲ್ಲಿ ಚಲಾಯಿಸಿದ್ದೆ ಅಂತ ಹೇಳಿರಲಿಲ್ಲ. ಈಗ ನೆನಪಿಸಿಕೊಂಡು ಆ ಅಂಗಡಿಯ ಜಾಗ, ಹೆಸರು ಹೇಳಿದೆ. 'ಅಯ್ಯೋ ಮಾರಾಯ, ಆತ ಅಂಗಡಿ ಮುಚ್ಚಿ ಸುಮಾರು ವರ್ಷಗಳಾದವು. ಎಲ್ಲಿ ಹೋದ ಗೊತ್ತಿಲ್ಲ' ಅಂತ ಕೈಯೆತ್ತಿದ.

   ಸದ್ಯಕ್ಕಂತೂ ಆ ಐನೂರು ನನ್ನ ಬಳಿಯೇ ಇದೆ. ಜೊತೆಗೊಂದು ಜಿಜ್ಞಾಸೆ ಕೂಡ. ಅಕಸ್ಮಾತ್ 
ಈ ದುಡ್ಡು ಹಿಂತಿರುಗಿಸಿದ್ದರೆ ಆಗ ದೊರಕುತ್ತಿದ್ದ ಸಮಾಧಾನ ದೊಡ್ಡದಾಗಿರುತ್ತಿತ್ತೋ ಅಥವಾ ಹಣ 
ಹಿಂದಿರುಗಿಸಲಾಗದೇ ಈಗ ನನ್ನೊಳಗೆ ಶಾಶ್ವತವಾಗಿ ಉಳಿದುಹೋಗಲಿರುವ ಅಸಮಾಧಾನ ದೊಡ್ಡದೋ?  
                                                                  -
ದೊಡ್ಡದಾಗಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ ಅಥವಾ ಲಿಂಕ್ ಗಾಗಿ ಇಲ್ಲಿ ಕ್ಲಿಕ್ಕಿಸಿ
(ವಿಜಯಕರ್ನಾಟಕದಲ್ಲಿ 02.08.2017 ಬುಧವಾರದ 'ಮಾಯಾಲಾಂದ್ರ' ಅಂಕಣದಲ್ಲಿ ಪ್ರಕಟಿತ)